ಮಂಡ್ಯ : ಕೆರಗೋಡು ಧ್ವಜ ವಿವಾದ ಸಂಬಂಧ ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರು ಸುದ್ದಿಗೋಷ್ಠಿ ನಡೆಸಿದ್ದಾರೆ. ಕೆರಗೋಡು ಹನುಮಧ್ವಜ ತೆರವು ಪ್ರಕರಣ ಸಂಬಂಧ ಪಾದಯಾತ್ರೆ ಸಮಯದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಜೆಡಿಎಸ್ ಕಾರಣ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಆರೋಪಿಸಿದ್ದರು. ಇದಕ್ಕೆ ಸುದ್ದಿಗೋಷ್ಠಿ ಮೂಲಕ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ತಿರುಗೇಟು ನೀಡಿದ್ದಾರೆ. ಕೆರಗೋಡಿನಲ್ಲಿ ಧ್ವಜ ಸ್ತಂಭದ ವಿಚಾರವಾಗಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಮೂಲ ಕಾರಣ ಮಂಡ್ಯ ಶಾಸಕ ಗಣಿಗ ರವಿ ಎಂದು ಆರೋಪಿಸಿದ್ದಾರೆ. ಪಕ್ಷಾತೀತವಾಗಿ ಧ್ವಜಸ್ತಂಭ ನಿರ್ಮಾಣ ಮಾಡಬೇಕೆಂದು ಶಾಸಕರೇ ಹೇಳಿದ್ದಾರೆ. ಗ್ರಾಮಸ್ಥರಿಗೆ 22ನೇ ತಾರೀಖು ಉದ್ಘಾಟನೆಯನ್ನು ನಾನೇ ಜವಾಬ್ದಾರಿ ತೆಗೆದುಕೊಂಡು ಮಾಡ್ತೀನಿ ಎಂದು ಗಣಿಗ ರವಿ ಹೇಳಿದ್ದಾರೆ. 22ರಂದು ನಾವು ಮಾರಗೌಡನಹಳ್ಳಿಗೆ ಹೋಗುವಾಗ ಕೆರಗೋಡು ಗ್ರಾಮಸ್ಥರು ನಮ್ಮ ಕಾರು ಅಡ್ಡಗಟ್ಟಿದ್ರು. ನೀವು ಬಂದು ಧ್ವಜಕ್ಕೆ ಪೂಜೆ ಮಾಡಿ ಎಂದು ಕೇಳಿಕೊಂಡರು. ನಾವು ಅದರಂತೆ ಧ್ವಜಕ್ಕೆ ಪೂಜೆ ಮಾಡಿದೆವು. ಇದನ್ನು ಗಣಿಗ ರವಿ ಅವರಿಗೆ ಸಹಿಸಲು ಸಾಧ್ಯವಾಗಿಲ್ಲ. ಇದಕ್ಕಾಗಿ ಶಾಸಕರು ಧ್ವಜ ಇಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.