ಮೈಸೂರು: ನಗರದ ರಂಗಚಾರ್ಲು ಮೆಮೋರಿಯಲ್ ಹಾಲ್ (ಟೌನ್ ಹಾಲ್) ಬಳಿ ಇರುವ ಸುಮಾರು 100 ವರ್ಷಗಳ ಹಿಂದಿನ ಸಿಲ್ವರ್ ಜ್ಯೂಬಿಲಿ ಕ್ಲಾಕ್ ಟವರ್ ಎಂದು ಕರೆಯಲ್ಪಡುವ ದೊಡ್ಡ ಗಡಿಯಾರಕ್ಕೆ ಈಗ ಕಾಯಕಲ್ಪ ಶುರುವಾಗಿದೆ. ಸುಮಾರು ವರ್ಷಗಳಿಂದ ಕ್ಲಾಕ್ ಟವರ್ ಅಭಿವೃದ್ಧಿಪಡಿಸುವಂತೆ ಒತ್ತಾಯ ಕೇಳಿ ಬರುತ್ತಿತ್ತು.
ಮೈಸೂರು ನಗರ ಪಾಲಿಕೆ, ಪುರಾತತ್ವ ವಸ್ತು ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆ ಸುಮಾರು 35 ಲಕ್ಷ ಅನುದಾನದಲ್ಲಿ ಈ ದೊಡ್ಡ ಗಡಿಯಾರವನ್ನು ಜೀರ್ಣೋದ್ಧಾರ ಮಾಡುವುದಕ್ಕೆ ಮುಂದಾಗಿದ್ದು ಜೀರ್ಣೋದ್ಧಾರ ಕೆಲಸ ಶುರುವಾಗಿದೆ.1927 ರಲ್ಲಿ ಆಗಿನ ಮೈಸೂರು ಸಂಸ್ಥಾನದ ಒಡೆಯರ್ ಆಗಿದ್ದ ಕೃಷ್ಣರಾಜ ಒಡೆಯರ್ ಅವರ ಆಡಳಿತದ ರಜತ ಮಹೋತ್ಸವದ ಸ್ಮರಣಾರ್ಥವಾಗಿ ಅರಮನೆಯಲ್ಲಿ ಕೆಲಸ ನಿರ್ವಹಣೆ ಮಾಡುವ ಸಿಬ್ಬಂದಿಗಳು ದೇಣಿಗೆ ಸಂಗ್ರಹಿಸಿ ಈ ದೊಡ್ಡ ನಿರ್ಮಾಣ ಮಾಡಲಾಗಿತ್ತು. ಈ ಗಡಿಯಾರವು ಸುಮಾರು 75 ಅಡಿಗೂ ಎತ್ತರದ ಗೋಡೆಯ ಮೇಲೆ ನಿರ್ಮಿತವಾಗಿದೆ.