ಹನೂರು: ಸರ್ಕಾರದ ಯಾವುದೇ ಯೋಜನೆಗಳಿಂದ ವಂಚಿತರಾಗದೆ ಇರಲು ಹಾಗೂ ಆ ಯೋಜನೆಗಳನ್ನು ಉಪಯೋಗಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಪಿಂಚಣಿ ಆದಾಲತ್ ಕಾರ್ಯಕ್ರಮವನ್ನು ತಾಲೂಕಿನ ಚಿಂಚಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಈ ಅನುಕೂಲವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಉಪ ತಹಶೀಲ್ದಾರ್ ನಾಗೇಂದ್ರ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೃದ್ಯಾಪ ಯೋಜನೆ, ವಿಧವಾ ವೇತನ, ವಿಶೇಷ ಚೇತನರು, ಆಸಿಡ್ ದಾಳಿಗೆ ತುತ್ತಾದವರು, ವಿವಾಹ ಆಗದೆ ಇರುವವರು ಸೇರಿದಂತೆ ವಿವಿಧ ಸ್ಥರದ ಅನಾನುಕೂಲತೆ ಹೊಂದಿದವರ ಕಲ್ಯಾಣಕ್ಕೆ ಸರ್ಕಾರ ನೆರವನ್ನು ಒದಗಿಸುತ್ತಿದೆ. ವೃದ್ಯಾಪ ಯೋಜನೆಯಡಿ 600 ರೂ. ರಿಂದ 1200 ರೂ.ಹೆಚ್ಚಳ ಮಾಡಬೇಕೆಂದರೆ ಅಗತ್ಯ ದಾಖಲೆಗಳನ್ನು ಒದಗಿಸಿ. ನೂತನವಾಗಿ ವಿವಿಧ ಪಿಂಚಣಿ ಯೋಜನೆ ಪಡೆಯಬೇಕಾದವರು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್,ವೈದ್ಯರಿಂದ ದೃಢೀಕರಿಸಿದ ವಯಸ್ಸಿನ ಪ್ರಮಾಣ ಪತ್ರ ಇನ್ನಿತರೆ ದಾಖಲೆಗಳನ್ನು ನೀಡಬೇಕು ಎಂಬುದು ಸೇರಿದಂತೆ ಅನೇಕ ಉಪಯುಕ್ತ ಮಾಹಿತಿಗಳನ್ನು ಸಾರ್ವಜನಿಕರಿಗೆ ಒದಗಿಸಿದರು.
ಮದುವೆ ಆಗದ ಪುರುಷರಿಗೆ ಸೌಲಭ್ಯ ಇಲ್ಲವೇ?!
ಉಪತಹಸಿಲ್ದಾರ್ ನಾಗೇಂದ್ರ ಅವರು ವಿವಿಧ ಪಿಂಚಣಿ ಸೌಲಭ್ಯ ಸಂಬಂಧಿತ ಅನುಕೂಲಗಳ ಬಗ್ಗೆ ಮಾತನಾಡುವಾಗ ಮದುವೆಯಾಗದ ಮಹಿಳೆರಿಗೆ ಮನಸ್ವಿನಿ ಯೋಜನೆಯಡಿ ಪಿಂಚಣಿ ಅನುಕೂಲ ಇದೆ ಎಂದು ಹೇಳುವಾಗ ಗ್ರಾಮದ ಯುವಕನೋರ್ವ ಸಾರ್, ಮದುವೆಯಾಗದ ಪುರುಷರಿಗೆ ಸೌಲಭ್ಯ ಇಲ್ಲವೇ 40- 45 ವರ್ಷದ ದಾಟಿದ್ದರೂ ಹುಡುಗರಿಗೆ ಹುಡುಗಿಯರು ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು. ಈ ಮಾತಿಗೆ ಉಪ ತಹಸೀಲ್ದಾರ್ ನಾಗೇಂದ್ರ, ಗ್ರಾಮ ಆಡಳಿತಾಧಿಕಾರಿ ಶೇಷಣ್ಣ ಸೇರಿದಂತೆ ನೆರೆದಿದ್ದ ಸಭಿಕರು ನಗೆಗಡಲಲ್ಲಿ ತೇಲಿದರು. ಬಳಿಕ ಗ್ರಾಮ ಆಡಳಿತಾಧಿಕಾರಿ ಶೇಷಣ್ಣ ಉತ್ತರಿಸಿ ಆ ಯೋಜನೆ ಇಲ್ಲ ಎಂದು ನಗುತ್ತಲೇ ತಿಳಿಸಿದರು.
ಗ್ರಾಮ ಆಡಳಿತಾಧಿಕಾರಿ ಶೇಷಣ್ಣ, ಸಿಬ್ಬಂದಿ ಶಿವರಾಜು, ಗ್ರಾ.ಪಂ.ಸದಸ್ಯ ಕುಮಾರ್, ಶಿಕ್ಷಕರಾದ ರಾಜು, ಸಾರ್ವಜನಿಕರು ಉಪಸ್ಥಿತರಿದ್ದರು.