ಹಾಸನ : ರಸ್ತೆಬದಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಯುವಕನಿಗೆ ಕಾರು ಡಿಕ್ಕಿಯಾದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ಪಟ್ಟಣದ ಹೊಸ ಬಸ್ ನಿಲ್ದಾಣದ ಮುಂಭಾಗ ಭಾನುವಾರ ರಾತ್ರಿ ನಡೆದಿದೆ. ಇನ್ನು ಕೆಸಗನಹಳ್ಳಿ ಗ್ರಾಮದ ಲೋಕೇಶ್ (22) ಎಂಬುವರು ಮೃತ ಯುವಕ ಎಂದು ಗುರ್ತಿಸಲಾಗಿದ್ದು, ಸಕಲೇಶಪುರ ಪುರಸಭಾ ಮಾಜಿ ಅಧ್ಯಕ್ಷ ಸಂತೋಷ್ ಜೈನ್ಗೆ ಸೇರಿದ ಕಿಯಾ ಕಾರು ಇದಾಗಿದ್ದು, ಹರ್ಷ ಜೈನ್ ಗಾಂಜಾ ಸೇವಿಸಿ ಕಾರು ಚಲಾಯಿಸುತ್ತಿದ್ದ ಎನ್ನಲಾಗಿದೆ. ಅಪಘಾತದ ನಂತರ ಹರ್ಷ ಜೈನ್ ಕಾರು ಬಿಟ್ಟು ಪರಾರಿಯಾಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.