ಚಾಮರಾಜನಗರ: ಒಂಟಿ ಸಲಗವೊಂದು ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಕಬ್ಬು ತುಂಬಿದ್ದ ಲಾರಿಯೊಂದರಲ್ಲಿ ಕಬ್ಬು ತಿಂದು,ಬಳಿಕ ಚಾಲಕರನ್ನು ಅಟ್ಟಾಡಿಸಿದ ಘಟನೆ ಚಾಮರಾಜನಗರ – ತಮಿಳುನಾಡು ಗಡಿಯ ದಿಂಬಂ ಬಳಿ ನಡೆದಿದೆ.
ಈ ರಸ್ತೆಯಲ್ಲಿ ಸಂಚರಿಸುವ ಕಬ್ಬು ತುಂಬಿದ ಲಾರಿ ಹಾಗೂ ತರಕಾರಿ ವಾಹನಗಳ ಚಾಲಕರು ಆಗಿಂದಾಗ್ಗೆ ರಸ್ತೆಗೆ ಬರುವ ಕಾಡಾನೆಗಳಿಗೆ ಕಬ್ಬು ಹಾಗೂ ತರಕಾರಿಗಳನ್ನು ನೀಡುವ ಪರಿಪಾಠ ಮಾಡಿದ್ದಾರೆ. ತಾಳವಾಡಿಯಿಂದ ಸತ್ಯಮಂಗಲಕ್ಕೆ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಲಾರಿ ದಿಂಬಂ ಸಮೀಪದ ಗಂಜೀಕೇಂದ್ರದ ಬಳಿ ಕೆಟ್ಟು ನಿಂತಿತ್ತು.
ಆಹಾರ ಅರಸಿ ಕಾಡಿನಿಂದ ರಸ್ತೆಗೆ ಬಂದ ಒಂಟಿ ಸಲಗ ಕೆಟ್ಟು ನಿಂತಿದ್ದ ಲಾರಿಯಿಂದ ಕಬ್ಬನ್ನು ಎಳೆದು ತಿನ್ನಲು ಆರಭಿಸಿತು. ಬಳಿಕ ಸಲಗ ಏಕಾಏಕಿ ಚಾಲಕರ ಮೇಲೆ ದಾಳಿ ನಡೆಸಲು ಮುಂದಾಯಿತು. ಇದನ್ನು ಗಮನಿಸಿದ ಚಾಲಕರು ಭಯಭೀತರಾಗಿ ಲಾರಿಯಿಂದ ಇಳಿದು ಓಡಲಾರಂಭಿದರು. ಅಷ್ಟಕ್ಕೆ ಸುಮ್ಮನಿರದ ಆನೆ ಲಾರಿಗೆ ಕಟ್ಟಿದ್ದ ಹಗ್ಗವನ್ನು ಎಳೆದು ದಾಂಧಲೆ ನಡೆಸಿತು.
ಆನೆಯ ದಾಂಧಲೆಯನ್ನು ಕಂಡ ಮತ್ತೊಂದು ಲಾ ರಿಯ ಚಾಲಕ ತಮ್ಮ ಮೊಬೈಲ್ ನಲ್ಲಿ ಆ ದೃಶ್ಯವ ನ್ನು ಸೆರೆಹಿಡಿದ್ದಾರೆ. ಒಂಟಿ ಸಲಗದ ಪುಂಡಾಟ ದಿಂದ ಬೆಂಗಳೂರು – ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಕಾಡಾನೆಗಳು ಆಗಿಂದಾಗ್ಗೆ ಆಹಾರ ಅರಸಿ ಕಾಡಿನಿಂದ ರಸ್ತೆಗೆ ಬಂದು, ಕಬ್ಬು ತುಂಬಿದ ಲಾರಿಗಳನ್ನು ಅಡ್ಡಗಟ್ಟಿ ಕಬ್ಬು ತಿನ್ನಲು ರಂಪಾಟ ನಡೆಸಲಿವೆ. ಆನೆಗಳು ಕಾಡಿನೊಳಗೆ ಹೊಗುವವರೆಗೂ ವಾಹನ ಸವಾರರು ಹೆದ್ದಾರಿ ಯಲ್ಲೆ ನಿಂತು ಪರದಾಡುವ ಸ್ಥಿತಿ ನಿರ್ಮಾಣ ವಾಗುತ್ತಿದೆ.