ಇಂದಿನಿಂದ ಕೃಷಿ ಹವಾಮಾನ ಘಟಕ ಸಂಪೂರ್ಣ ಸ್ಥಗಿತ
ಮಳೆ, ಗುಡುಗು, ಗಾಳಿ ಮುನ್ಸೂಚನೆಯೊಂದಿಗೆ ರೈತಮಿತ್ರನಂತಿದ್ದ ಘಟಕ
ಸಣ್ಣುವಂಡ ಕಿಶೋರ್ ನಾಚಪ್ಪ ಮಡಿಕೇರಿ
ಕೃಷಿ ಪೂರಕ ಹವಾಮಾನ ವರದಿ ನೀಡುತ್ತಿದ್ದ ಕೃಷಿ ಹವಾಮಾನ ಘಟಕ ಇಡೀ ದೇಶದಲ್ಲಿ ಮಾರ್ಚ್ ಒಂದರಿಂದ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ದೇಶದಲ್ಲಿದ್ದ 199 ಘಟಕ ಹೊಂದಿದ ಕೇಂದ್ರವು ಕಾರ್ಯ ನಿಲ್ಲಿಸಲು ಸರ್ಕಾರದಿಂದ ಸೂಕ್ತ ನಿರ್ದೇಶನ ನೀಡಿದ್ದು, 398 ಉದ್ಯೋಗಿಗಳು ಹುದ್ದೆ ಕಳೆದುಕೊಂಡಿದ್ದಾರೆ. ಇದರಿಂದ ಕೃಷಿಕರಿಗೆ ಹೆಚ್ಚು ನಷ್ಟ ಎಂಬ ಅಭಿಪ್ರಾಯ ಹೆಚ್ಚಾಗಿ ವ್ಯಕ್ತಗೊಂಡಿದೆ.
ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಭಾರತ ಹವಾಮಾನ ಇಲಾಖೆ ಅಧೀನದಲ್ಲಿ ದೇಶದಲ್ಲಿ 199 ಘಟಕಗಳು ಕಾರ್ಯನಿರ್ವಹಿಸುತ್ತಿದ್ದವು. ಸರ್ಕಾರದ ನಿರ್ಧಾರದಿಂದ ಸ್ಥಳೀಯವಾಗಿ ರೈತರಿಗೆ ಸಾಕಷ್ಟು ಮಾಹಿತಿಗಳು, ಮಳೆ, ಬಿಸಿಲು, ಚಳಿ, ತಾಪಮಾನ, ಸೂಕ್ತ ಸಲಹೆಗಳಿಂದ ವಂಚಿತವಾಗುವಂತಾಗಿದೆ.
ಕರ್ನಾಟಕ ರಾಜ್ಯದಲ್ಲಿ ಕೊಡಗು, ಬಳ್ಳಾರಿ, ಬಾಗಲಕೋಟೆ, ಚಾಮರಾಜನಗರ, ಚಿಕ್ಕಮಗಳೂರು, ಹಾವೇರಿ, ಕೋಲಾರ, ಕೊಪ್ಪಳ, ಮಂಡ್ಯ, ರಾಮನಗರ, ತುಮಕೂರು, ಯಾದಗಿರಿ ಸೇರಿದಂತೆ 12 ಘಟಕಗಳು ಕಾರ್ಯನಿರ್ವಹಿಸುತ್ತಿದ್ದವು.
2019 ರಲ್ಲಿ ಚಾಲನೆಗೆ ನೀಡಲಾಯಿತು. ಕೃಷಿಕರ ಪಾಲಿಗೆ ಹವಾಮಾನ ಮಿತ್ರನಾಗಿ ಜವಬ್ದಾರಿ ನಿಭಾಯಿಸಿದೆ. ಸಾಕಷ್ಟು ರೈತರು ಘಟಕದ ಪೂರ್ವ ಮಾಹಿತಿ ಆಧರಿಸಿ ಕೃಷಿ ಚಟುವಟಿಕೆಗೆ ಅವಲಂಭಿಸಿಕೊಂಡಿದ್ದರು.
ಮಳೆ ಮುನ್ಸೂಚನೆ, ತೇವಾಂಶ, ತಾಪಮಾನ, ಮೋಡ, ಗಾಳಿಯ ವೇಗದ ಬಗ್ಗೆ ಪ್ರತೀ 5 ದಿನಗಳ ಮಾಹಿತಿಯನ್ನು ಮಂಗಳವಾರ ಮತ್ತು ಶುಕ್ರವಾರ ಹಂಚಿಕೊಳ್ಳಲಾಗುತ್ತಿತ್ತು. 30 ವರ್ಷಗಳ ಮಳೆ ದಾಖಲಾತಿಗಳನ್ನು ಆಧರಿಸಿ ಮಳೆಯ ಮುನ್ಸೂಚನೆ, ಚಂಡಮಾರುತದ ಪ್ರಭಾವ, ಸ್ಥಳೀಯವಾಗಿ ಮುಂಗಾರು, ಹಿಂಗಾರು ಮಳೆಯ ಮುನ್ಸೂಚನೆ ನೀಡುತ್ತಿತ್ತು.
ಸಾಮಾಜಿಕ ಜಾಲತಾಣ ಅವಲಂಬನೆ ; ಸಾಮಾಜಿಕ ಜಾಲತಾಣಗಳ ಮೂಲಕ ಗ್ರೂಪ್ ರಚಿಸಿಕೊಂಡು ಜಿಲ್ಲೆಯ ಪ್ರತೀ ಮೂಲೆಗೂ ಮಾಹಿತಿ ಹಂಚಿಕೊಳ್ಳಲಾಗುತಿತ್ತು. ರೈತರು ಕೂಡ ಮಳೆಯ ಮಾಹಿತಿ ಹಂಚಿಕೊಂಡು ಘಟಕಕ್ಕೆ ಸ್ಪಂಧಿಸುತ್ತಿದ್ದರು. ಜಿಲ್ಲೆಯ ಗಡಿ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದ ತಂತ್ರಜ್ಞಾನವನ್ನು ಬ್ಲಾಕ್ ಮಟ್ಟಕ್ಕೆ ವಿಸ್ತರಿಸಿಕೊಂಡಿತ್ತು. ಮಳೆ ಹೆಚ್ಚು ಬೀಳುವ ಬೆಟ್ಟ ಪ್ರದೇಶ, ಬೆಟ್ಟದ ತಪ್ಪಲುಗಳ ವ್ಯಾಪ್ತಿಯಲ್ಲಿ ಮಳೆಯ ಮುನ್ಸೂಚನೆ ಹೆಚ್ಚು ಪರಿಣಾಮಕಾರಿಯಾಗುತ್ತಿದೆ. ಗಾಳಿಯ ವೇಗವನ್ನು ತಿಳಿಸುವುದರಿಂದ ಒಂದಷ್ಟು ದುರ್ಘಟನೆಗಳನ್ನು ನಿಯಂತ್ರಿಸುವ ಪ್ರಯತ್ನ ನಡೆಸಿತ್ತು.
ಕಾರ್ಯನಿರ್ವಹಣೆ ; ಜಿಪಿಆರ್ಎಸ್ ಸರ್ವರ್ ಮೂಲಕ ಪುಣೆಯಲ್ಲಿರುವ ಕೇಂದ್ರ ಸ್ಥಾನಕ್ಕೆ ಮಾಹಿತಿ ರವಾನೆಯಾಗುತ್ತದೆ. ಪ್ರತೀ 15 ನಿಮಿಷಕೊಮ್ಮೆ ಸ್ಥಳೀಯ ಹವಾಗುಣ, ಗಾಳಿಯ ವೇಗ, ಮೋಡ ವಾತಾವರಣ ಮಾಹಿತಿ ಪಡೆದುಕೊಂಡು ದಾಖಲಾತಿ ಮಾಡಲಾಗುತ್ತದೆ. ಇದರಂತೆ ಪ್ರತೀ 5 ದಿನಕೊಮ್ಮೆ ರೈತರಿಗೆ, ನಿವಾಸಿಗಳಿಗೆ 5 ದಿನಗಳ ಹವಾಮಾನವನ್ನು ಬಿತ್ತರಿಸುತ್ತಿತ್ತು.
ಕೃಷಿಕರಿಗೆ ವರದಾನವಾಗಿತ್ತು ; ಹವಾಮಾನ ವರದಿ ನೀಡುವುದರಿಂದ ಕೃಷಿಗೂ ಪ್ರಯೋಜನವಾಗುತ್ತಿದೆ. ಮಳೆ ಮುನ್ಸೂಚನೆಯನ್ನು 3-4 ದಿನಗಳ ಮುಂಚೆ ತಿಳಿಯುವುದರಿಂದ ಗೊಬ್ಬರ ಹಾಕುವುದು, ಅತಿವೃಷ್ಠಿಯಿಂದ ಗೊಬ್ಬರ ಕೊಚ್ಚಿಹೋಗದಂತೆ ಮುಂಜಾಗೃತೆ, ಹೆಚ್ಚು ಗಾಳಿ ಇರುವ ಸಂದರ್ಭ ತೋಟಗಳಿಂದ ದೂರ ಉಳಿಯುವುದರಿಂದ ಮರದ ರೆಂಬೆ ಮುರಿದು ನಡೆಯುವ ಹಾನಿಯನ್ನು ತಪ್ಪಿಸುವುದು, ಮುನ್ಸೂಚನೆ ಆಧರಿಸಿ ಕೃಷಿಯಿಂದ ದೂರ ಉಳಿಯುವುದು, ಕೃಷಿ ಪೂರಕ ಚಟುವಟಿಕೆ, ಬೆಳೆಗೆ ನೀಡುವ ಔಷಧಿಗಳ ಸಿಂಪಡಣೆ, ಹವಾಮಾನ ಅನುಗುಣವಾಗಿ ತಳಿಗಳ ಆಯ್ಕೆ, ಕೃಷಿ ಆರಂಭದ ಯೋಜನೆ ಹೀಗೆ ಸಾಕಷ್ಟು ಲಾಭ ಇದರಿಂದ ದೊರೆಯಲಿದೆ. ಬರೆ ಕುಸಿದಿರುವ ಕಡೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇರುವಾಗ ಆ ಪ್ರದೇಶಗಳಿಂದ ಜನರನ್ನು ಹಾಗೂ ಹೊಳೆ, ತೋಡುಗಳ ಬದಿಯಲ್ಲಿರುವವರನ್ನು ಬೇರೆಡೆಗೆ ಸ್ಥಳಾಂತರಿಸಲು ಸಹಕಾರಿಯಾಗಿತ್ತು.
ಮತ್ತಷ್ಟು ಮುಂಜಾಗೃತೆ ಸಲಹೆ ; ಮಳೆ, ಗುಡುಗು, ಗಾಳಿ ಮುನ್ಸೂಚನೆ ಅರಿತು ಮಾರ್ಗದರ್ಶನ ನೀಡಲಾಗುತ್ತಿದೆ. ಮನೆಯೊಳಗೆ ಇರುವಂತೆ, ಪ್ರಯಾಣ ತಪ್ಪಿಸುವುದು, ಸುರಕ್ಷತೆ ವಿಧಾನ, ಆಶ್ರಯ, ಮರದ ಕೆಳಗೆ ನಿಲ್ಲದೆ ದೂರ ಇರುವುದು, ಕಾಂಕ್ರಿಟ್ ಗೋಡೆ ತಾಗದಂತೆ ಕ್ರಮ, ವಿದ್ಯುತ್ ಚಾಲಿತ ಉಪಕರಣದಿಂದ ದೂರ ಉಳಿಯುವುದು, ಜಲಮೂಲ ಪ್ರದೇಶಗಳಿಂದ, ವಿದ್ಯುತ್ ತಂತಿ ತುಂಡಾಗಿದ್ದರೆ ಸ್ವರಕ್ಷಣೆ, ವಾಹನೆ ಚಾಲನೆಯಲ್ಲಿ ಎಚ್ಚರಿಕೆ ಬಗ್ಗೆ ಸೂಕ್ತ ಮಾರ್ಗದರ್ಶನದ ಜತೆ ಶೇಕಡ 70-80 ರಷ್ಟು ನಿಖರ ಮಾಹಿತಿ ನೀಡುವ ಪ್ರಯತ್ನ ನಡೆಸಿತ್ತು.
[ಕೃಷಿ ಹವಾಮಾನ ಘಟಕದಿಂದ ಕೃಷಿಕರಿಗೆ ಹೆಚ್ಚು ಅನುಕೂಲವಾಗಿತ್ತು. ಹವಾಮಾನ ವರದಿ ಅವಲಂಬನೆ ಹೆಚ್ಚಾಗಿತ್ತು. ಇದೀಗ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.] – ಸಣ್ಣುವಂಡ ಕೆ. ಚಂಗಪ್ಪ, ಪರಿವೀಕ್ಷಕರು, ಕೃಷಿ ಹವಾಮಾನ ಘಟಕ, ಕೆವಿಕೆ, ಗೋಣಿಕೊಪ್ಪ.
ಫೋಟೋ 24 ಎಂಡಿಕೆ 02 : ಗೋಣಿಕೊಪ್ಪ ಕೆವಿಕೆ ಅತ್ತೂರು ಸಸ್ಯಕ್ಷೇತ್ರದಲ್ಲಿ ಸ್ಥಾಪಿಸಿರುವ ಘಟಕ (ಸಾಂದಾರ್ಭಿಕ ಚಿತ್ರ)
03 ; ಸಣ್ಣುವಂಡ ಕೆ. ಚಂಗಪ್ಪ