ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಸನದಲ್ಲಿ ಮಾತನಾಡಿದ್ದಾರೆ. ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಲು ಬಂದಿರುವ ಅವರು, ಹಾಸನ ಹೊರವಲಯದ ಬೂವನಹಳ್ಳಿ ಹೆಲಿಪ್ಯಾಡ್ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಲೋಕಸಭೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಷ್ಟೊಂದು ಗೊಂದಲ ಇಲ್ಲ ಹಾಸನದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದಾರೆ ಎಂದರು. ಲೋಕಸಭಾ ಅಭ್ಯರ್ಥಿಗಳ ಪಟ್ಟಿ ತಕ್ಷಣ ಬಿಡುಗಡೆ ಮಾಡುತ್ತೇವೆ. ಅಭ್ಯರ್ಥಿ ಆಯ್ಕೆ ಮಾಡಲು ಸಮಸ್ಯೆ ಏನು ಇಲ್ಲ ಎಂದು ಹೇಳಿದರು.
ವಿದಾನಸಭೆ ಆವರಣದಲ್ಲಿ ಪಾಕ್ ಪರ ಘೋಷಣೆ ವಿಚಾರವಾಗಿ ಎಫ್ಎಸ್ಎಲ್ ವರದಿ ಬಹಿರಂಗ ಪಡಿಸುವಂತೆ ವಿಪಕ್ಷ ನಾಯಕರ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿ, ವರದಿ ಬಂದ ಕೂಡಲೇ ಬಹಿರಂಗ ಮಾಡುತ್ತೇವೆ. ಯಾರೇ ಆದರೂ ಕೂಡ ಭಾರತದ ಪರ ಇಲ್ಲದಿರುವ, ಬೇರೆ ದೇಶದ ಮೇಲೆ ನಿಷ್ಠೆ ಇದ್ದರೆ ಅಂತಹವರ ಕಠಿಣವಾದ ಕ್ರಮ ಕೈಗೊಳ್ಳುತ್ತೇವೆ. ದೇಶ ಭಕ್ತಿಯನ್ನು ನಮಗೆ ಬಿಜೆಪಿಯವರು ಹೇಳಿ ಕೊಡಬೇಕಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ದೇಶ ಭಕ್ತಿ ಹೇಳಿ ಕೊಡಬೇಕಾ? ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು ಯಾರು? ಅವರು ರಾಜಕೀಯಕ್ಕೋಸ್ಕರ ಏನೋ ಹೇಳ್ತಾರೆ, ಅದು ಬೇರೆ ವಿಚಾರ. ಅವರು ಏನಾದರೂ ಆ ತರ ಕೂಗಿದ್ರೆ ಕಠಿಣವಾದ ಕ್ರಮ ತೆಗೆದುಕೊಳ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.