ನವದೆಹಲಿ: 2024ರ ಸಾರ್ವತ್ರಿಕ ಚುನಾವಣೆ ಘೋಷಣೆಗೂ ಮುನ್ನವೇ ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದು, ಇದೀಗ ಹಾಲಿ ಸಂಸದರೊಬ್ಬರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ ಅವರು ರಾಜಕೀಯಕ್ಕೆ ಗುಡ್ಬೈ ಹೇಳಿದ್ದಾರೆ. ರಾಜಕೀಯದಿಂದ ದೂರ ಉಳಿಯುವ ಪ್ರಕ್ರಿಯೆ ಬಿಜೆಪಿ ಪಕ್ಷದಲ್ಲಿ ಮುಂದುವರಿದಿದ್ದು, ಪಟ್ಟಿ ಬಿಡುಗಡೆಗೂ ಮುನ್ನವೇ ಗೌತಮ್ ಗಂಭೀರ್ ಹಾಗೂ ಜಯಂತ್ ಸಿನ್ಹಾ ಸಕ್ರಿಯ ರಾಜಕಾರಣದಿಂದ ದೂರವಿರುವುದಾಗಿ ಹೇಳಿದ ಬೆನ್ನಲ್ಲೇ ಇದೀಗ ಹಾಲಿ ಸಂಸದರೊಬ್ಬರು ರಾಜಕೀಯಕ್ಕೆ ಗುಡ್ಬೈ ಹೇಳಿದ್ದಾರೆ.
ಹೌದು.. 2024ರ ಲೋಕಸಭೆ ಚುನಾವಣೆಗೆ ಘೋಷಿಸಲಾದ ಬಿಜೆಪಿ ಪಟ್ಟಿಯಲ್ಲಿ ಟಿಕೆಟ್ ನಿರಾಕರಿಸುತ್ತಿದ್ದಂತೆ ಮಾಜಿ ಕೇಂದ್ರ ಸಚಿವ, ಹಾಲಿ ಸಂಸದ ಡಾ.ಹರ್ಷವರ್ಧನ್ ಸಕ್ರಿಯ ರಾಜಕೀಯಕ್ಕೆ ಗುಡ್ಬೈ ಹೇಳಿದ್ದಾರೆ. ಶನಿವಾರ ಬಿಜೆಪಿ ಘೋಷಿಸಿದ ಟಿಕೆಟ್ಗಳಲ್ಲಿ ಡಾ.ಹರ್ಷವರ್ಧನ್ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಇದರ ಬೆನ್ನಲ್ಲೇ ಟ್ವಿಟ್ಟರ್ನಲ್ಲಿ ಸುದೀರ್ಘ ಪೋಸ್ಟ್ ಬರೆಯುವ ಮೂಲಕ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದ ಡಾ. ಹರ್ಷವರ್ಧನ್ ಅವರು, ಕೃಷ್ಣನಗರದ ನನ್ನ ಕ್ಲಿನಿಕ್ ನನಗಾಗಿ ಕಾಯುತ್ತಿದೆ. ಈಗ ನನ್ನ ಮೂಲ ಕೆಲಸಕ್ಕೆ ಮರಳಲು ಅನುಮತಿ ಬೇಕು ಎಂದು ಹೇಳಿದ್ದಾರೆ. ಐವತ್ತು ವರ್ಷಗಳ ಹಿಂದೆ, ನಾನು ಕಾನ್ಪುರದ ಜಿಎಸ್ವಿಎಂ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ಗೆ ಪ್ರವೇಶ ಪಡೆದಾಗ ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ಬಯಕೆಯಿಂದ ಮನುಕುಲದ ಸೇವೆ ನನ್ನ ಧ್ಯೇಯವಾಗಿತ್ತು ಎಂದು ಹೇಳಿದ್ದಾರೆ.