ಮೈಸೂರು: ಲೋಕಸಭಾ ಚುನಾವಣೆ ಬಂದಾಗ ವೋಟ್ ತೆಗೆದುಕೊಳ್ಳಲು ಪಾಕಿಸ್ತಾನ, ಭಯೋತ್ಪಾದನೆ ವಿಚಾರಗಳನ್ನು ಬಿಜೆಪಿ ಮುಂದಿಟ್ಟುಕೊಳ್ಳುತ್ತಾರೆ ಎಂದು ಮೈಸೂರಿನಲ್ಲಿ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಬಿಜೆಪಿ ಯವರಿಗೆ ಯಾವುದೇ ವಿಚಾರಗಳಿಲ್ಲ. ಕೆಲ ಮಾಧ್ಯಮಗಳು, ರಿಪೋರ್ಟರ್ ಗಳು ಆ ರೀತಿ ಕೂಗಿಲ್ಲ ಎಂದು ಹೇಳ್ತಿದ್ದಾರೆ. ಆದರು ಬಿಜೆಪಿಯವರು ಇದನ್ನು ಆರೋಪ ಮಾಡ್ತಿದ್ದಾರೆ. ಇಷ್ಟಾದರೂ ಸರ್ಕಾರ ಎಫ್ಎಸ್ಎಲ್ ವರದಿಗೆ ಕಳುಹಿಸಿದೆ. ದೇವಸ್ಥಾನದ ಹಣವನ್ನು ಚರ್ಚ್, ಮಸೀದಿಗೆ ಕೊಡ್ತಿದ್ದಾರೆ ಅಂತ ಸುಳ್ಳು ಹೇಳ್ತಿದ್ರು. ಕೆಲ ಮಾಧ್ಯಮಗಳು ಕೂಡ ಇದೆ ಸುಳ್ಳನ್ನೇ ಹೇಳ್ತಿದ್ದಾವೆ. ಚುನಾವಣೆ ವೇಳೆ ಭಯೋತ್ಪಾದನೆ, ಪಾಕಿಸ್ತಾನ ವಿಚಾರಗಳು ಮುನ್ನೆಲೆಗೆ ಬರುತ್ತವೆ. ಎಲ್ಲಾ ಬಾರಿಯೂ ಸುಳ್ಳು ಹೇಳಿ ಜನರನ್ನು ನಂಬಿಸಲು ಸಾಧ್ಯವಿಲ್ಲ. ಜನರು ಎಚ್ಚೆತ್ತುಕೊಂಡಿದ್ದಾರೆ ಜನರ ಪರವಾಗಿ ಯಾರಿದ್ದಾರೆ ಅವರಿಗೆ ಮತ ನೀಡ್ತಾರೆ ಎಂದು ಹೇಳಿದರು.