ಹೊಸದಿಲ್ಲಿ: ರಷ್ಯಾ ಪ್ರವಾಸ ಕೈಗೊಂಡಿದ್ದ ಪಂಜಾಬ್ ಮತ್ತು ಹರಿಯಾಣದ ಯುವಕರ ಗುಂಪೊಂದು ಸಂಕಷ್ಟಕ್ಕೆ ಸಿಲುಕಿದ್ದು, ರಕ್ಷಣೆಗೆ ಧಾವಿಸುವಂತೆ ವಿಡಿಯೋ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ. ಬೆಲರಾಸ್ನಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ರಷ್ಯಾಗೆ ಕರೆದುಕೊಂಡು ಹೋದ ಏಜೆಂಟ್ ಒಬ್ಬರು ರಷ್ಯಾದಲ್ಲಿ ಸೇನೆಯ ತಾತ್ಕಾಲಿಕ ಪಡೆಗೆ ಸೇರ್ಪಡೆ ಮಾಡಿದ್ದಾರೆ. ದಾಖಲೆ ಪತ್ರಗಳಿಗೆ ಸಹಿ ಹಾಕಿಸಿಕೊಳ್ಳುವ ಮೂಲಕ ಉಕ್ರೇನ್ ವಿರುದ್ಧ ಸಮರಕ್ಕೆ ಒತ್ತಾಯಪೂರ್ವಕವಾಗಿ ಸೇರಿಸಿಕೊಳ್ಳಲಾಗಿದೆ ಎಂದು ಯುವಕರ ಗುಂಪು ವಿಡಿಯೋದಲ್ಲಿ ಆರೋಪಿಸಿದೆ. ಕಲಬುರಗಿಯ ಮೂವರು ಯುವಕರು ಸೇರಿದಂತೆ ವಿವಿಧ ರಾಜ್ಯಗಳ 12 ಮಂದಿಯನ್ನು ಉದ್ಯೋಗ ಕೊಡಿಸುವ ನೆಪದಲ್ಲಿ ಏಜೆಂಟ್ ಒಬ್ಬ ರಷ್ಯಾಕ್ಕೆ ಕರೆದೊಯ್ದು, ಅವರನ್ನು ಸೇನೆಗೆ ಒಪ್ಪಿಸಿದ ಘಟನೆ ತೀವ್ರ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಈ ವಿಡಿಯೋ ಬಹಿರಂಗವಾಗಿದೆ.