ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸ್ವಲ್ಪ ಸಿಟ್ಟು ಜಾಸ್ತಿ, ಶೀಘ್ರ ಕೋಪಿಷ್ಟ ಆದರೆ ಅದನ್ನು ಬೇಗ ಮರೆತುಬಿಡುತ್ತಾರೆ, ದೀರ್ಘ ದ್ವೇಷಿಯಲ್ಲ ಎಂದು ಕೇಂದ್ರ ಗಣಿ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ವಿಪ್ರ ಸ್ನೇಹ ಬಳಗದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಬಹಳ ಶ್ರಮಪಟ್ಟು ಬಿಜೆಪಿ ನಾಯಕರಾಗಿದ್ದಾರೆ ಎಂದರು. ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರಿಗೆ ವಿಪ್ರ ಸ್ನೇಹ ಬಳಗದಿಂದ ಸನ್ಮಾನ ಕಾರ್ಯಕ್ರಮ ನಡೆಯುತ್ತಿದೆ ಎನ್ನುವ ಕಾರಣಕ್ಕೆ ದೆಹಲಿಯಿಂದ ಬಂದೆ. ಯಡಿಯೂರಪ್ಪ ಬಹಳಷ್ಟು ಪರಿಶ್ರಮ ಪಟ್ಟು, ಪುರಸಭೆ ಅಧ್ಯಕ್ಷರಾಗಿ, ಹಲ್ಲೆಗೊಳಗಾಗಿ ಪುನರ್ಜನ್ಮ ಪಡೆದು ಬಿಜೆಪಿಯ ನಾಯಕರಾಗಿದ್ದಾರೆ. ಯಡಿಯೂರಪ್ಪ ಅವರಿಗೆ ಸ್ವಲ್ಪ ಸಿಟ್ಟು ಜಾಸ್ತಿ. ಸಿಟ್ಟು ಜಾಸ್ತಿಯಾದರೂ ಅಷ್ಟೇ ಬೇಗ ಮರೆತು ಬಿಡುತ್ತಾರೆ. ಶೀಘ್ರ ಕೋಪಿಷ್ಠ ಅಷ್ಟೇ, ಧೀರ್ಘ ದ್ವೇಷಿಯಲ್ಲ ಎಂದರು.
ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಯಡಿಯೂರಪ್ಪ ಅವರು ಸಿಟ್ಟು ಮಾಡಿಕೊಂಡಿದ್ದಾರೆ. ವೈಯಕ್ತಿಕವಾಗಿ ಎಂದಿಗೂ ದ್ವೇಷ ಇಟ್ಟುಕೊಂಡಿಲ್ಲ. ಇದೀಗ ಚುನಾವಣೆ ಬರುತ್ತಿದೆ. ಈ ಹಿಂದೆ ನಾವು ಅಧಿಕಾರ ಕಳೆದುಕೊಂಡಿದ್ದೇವೆ ಮತ್ತು ಅಧಿಕಾರ ಪಡೆದಿದ್ದೇವೆ. ಈ ಬಾರಿ ಮೋದಿಯವರ ಆಶೀರ್ವಾದ, ಮೋದಿ ಜನಪ್ರಿಯತೆ ದೇಶದ ಬದಲಾವಣೆ ದೃಷ್ಟಿಯಿಂದ ರಾಜ್ಯದಲ್ಲಿ 28 ಕ್ಕೆ 28 ಸ್ಥಾನ ಪಡೆಯುತ್ತೇವೆ ಎಂದರು.