ಮೈಸೂರು : ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ 22 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಚಿವ ಎಚ್ ಸಿ ಮಹದೇವಪ್ಪ ಭಾಷಣ ಆರಂಭಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಈ ವೇಳೆ ಮಹದೇವಪ್ಪ ಅವರು ಓಕೆ ಪೈನ್ ಪೈನ್ ಎಂದರು. ಅಲ್ಲದೆ, ನಾನು ಮಾತನಾಡಿದ ನಂತರ ನೀವು ಘೋಷಣೆ ಕೂಗಿ ಎಂದು ಕಿವಿ ಮಾತು ಹೇಳಿದರು.
ಮಾತು ಮುಂದುವರಿಸಿದ ಮಹದೇವಪ್ಪ, ಬೆಂಗಳೂರು-ಮೈಸೂರು ಹೈವೆ ವಿಚಾರ ಪ್ರಸ್ತಾಪ ಮಾಡಿದರು. ಈ ರಸ್ತೆ ನಮ್ಮ ಅವಧಿಯಲ್ಲಿ ಆಯ್ತಾ ಅಥವಾ ನಿಮ್ಮ ಅವಧಿಯಲ್ಲಿ ಆಯ್ತು ಅಂತಾ ನೋಡುವುದಲ್ಲ. ನಾನು 2013 ರ ಅವಧಿಯಲ್ಲಿ ಲೋಕೋಪಯೋಗಿ ಸಚಿವನಾಗಿ ಈ ರಸ್ತೆ ವಿಚಾರವನ್ನು ಗಡ್ಕರಿ ಅವರ ಬಳಿ ಪ್ರಸ್ತಾಪ ಮಾಡಿದ್ದೆ. ನಂತರ ಈಗ ರಸ್ತೆ ಆಗಿದೆ. ಜನರಿಗೆ ಒಳ್ಳೆಯ ಅಭಿವೃದ್ಧಿ ಕಾರ್ಯ ಕೊಡುವುದು ಮುಖ್ಯ. ಆ ಕೆಲಸವನ್ನು ಎಲ್ಲಾ ಪ್ರಜಾಪ್ರಭುತ್ವ ಸರಕಾರಗಳು ಒಟ್ಟಾಗಿ ಸೇರಿ ಮಾಡೋಣ ಎಂದರು.