ಚಾಮರಾಜನಗರ : ರಾಜ್ಯದಲ್ಲಿ ಕುಡಿಯಲು ನೀರಿಲ್ಲದೆ ಸಂಕಷ್ಟದ ಸ್ಥಿತಿ ಸೃಷ್ಟಿಯಾಗಿರುವ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ತಮಿಳುನಾಡಿಗೆ ಕಬಿನಿ ಹಾಗೂ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ನಗರದ ಹೊರ ವಲಯದ ಸೋಮವಾರಪೇಟೆ ಬಳಿ ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ-209 ಹಾದು ಹೋಗಿರುವ ನಗರದ ಹೊರ ವಲಯ ಸೋಮವಾರಪೇಟೆ ಬಳಿ ಜಮಾಯಿಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು, ರಾಜ್ಯ ಸರ್ಕಾರ ಹಾಗೂ ತಮಿ ಳುನಾಡು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ರಾಜ್ಯದಲ್ಲಿ ಮಳೆ ಇಲ್ಲದೆ ಜಲಾಶಯಗಳು ಸಂಪೂರ್ಣ ಬತ್ತಿ ಹೋಗಿವೆ. ಇದರಿಂದ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ. ಜಲಾಶಯಗಳಲ್ಲಿ ಇರುವ ಅಲ್ಪ ಸ್ವಲ್ಪ ನೀರನ್ನು ರಾಜ್ಯ ಸರ್ಕಾರ ಐಎನ್ ಡಿಐಎ ಒಕ್ಕೂಟವನ್ನು ಸಂತೃಪ್ತಿಪಡಿಸಲು ತಮಿಳುನಾಡಿಗೆ ನೀರು ಬಿಡುತ್ತಿದೆ. ಒಕ್ಕೂಟವನ್ನು ಸಂತೃಪ್ತಿಪಡಿಸಲು ನೀರು ಬಿಟ್ಟು ಜನರು ನೀರಿಗಾಗಿ ಪರದಾಡುವಂತೆ ಮಾಡಿದೆ. ಪ್ರಸ್ತುತ ಕೆಆರ್ಎಸ್ ಜಲಾಶಯದಲ್ಲಿ 16 ಟಿಎಂಸಿ ಮಾತ್ರ ನೀರು ಇದ್ದು, ಅದು ಸಹ ಬಿಸಿಲಿಗೆ ಹಿಂಗಿ ಹೋಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಬೆಂಗಳೂರು ಮತ್ತು ರಾಮನಗರ ಜಿಲ್ಲೆಯ ಜನರು ದುಡ್ಡು ಕೊಟ್ಟು ನೀರು ಖರೀದಿಸಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ಮುಂದುವರೆದರೆ ಕಾವೇರಿ ಮತ್ತು ಕಬಿನಿ ಜಲಾನಯನ ಪ್ರದೇಶದಲ್ಲಿ ಬರುವಂತಹ ಜಿಲ್ಲೆಯ ಜನರು ಸಹ ದುಡ್ಡು ಕೊಟ್ಟು ನೀರನ್ನು ಕುಡಿಯುವ ಸ್ಥಿತಿ ನಿರ್ಮಾಣವಾಗಲಿದೆ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುತಮಿಳುನಾಡಿಗೆ ನೀರು ಹರಿಸುವುದುನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದ ಪರಿಣಾಮ, ಹೆದ್ದಾರಿಯ ಎರಡು ಕಡೆ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು, ವಾಹನ ಸವಾರರು ಹಾಗೂ ಸಾರ್ವಜನಿಕರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಹನುಮಯ್ಯ, ರವಿ, ಮಂಜುನಾಥ್, ಗುರುಮಲ್ಲಪ್ಪ, ಕುಮಾರ್, ಕನಕ, ಶಾಂತರಾಜು, ಚಿಕ್ಕಸ್ವಾಮಿ, ಶಿವಣ್ಣ, ನಾಗೇಂದ್ರ,ಅಂಬಳೆ, ಮಹದೇವಸ್ವಾಮಿ, ಗಣೇಶ್, ಮಹೇಂದ್ರ, ಪ್ರವೀಣ್,ಸಿದ್ದರಾಜು, ಸತೀಶ್, ಸೇರಿದಂತೆ ಇತರರು ಇದ್ದರು.