ಮೈಸೂರು : ಲೋಕಸಭೆ ಚುನಾವಣೆ ಟಿಕೆಟ್ ಕೈತಪ್ಪುವ ಆತಂಕದಲ್ಲಿರುವ ಮೈಸೂರು ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಸೋಮವಾರ ತಡರಾತ್ರಿ ಫೇಸ್ ಬುಕ್ ಲೈವ್ನಲ್ಲಿ ಮಾತನಾಡಿ, ಕ್ಷೇತ್ರದ ಜನತೆಗೆ ಧನ್ಯವಾದ ಸಮರ್ಪಿಸಿದ್ದಾರೆ. ಕೊಡಗಿನ ಜನ ತೋರಿಸಿದ ಪ್ರೀತಿಯನ್ನು ಮರೆಯಲಾರೆ. ನಿಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದೀರಿ ಎಂದು ಭಾವುಕರಾದರು. ಸ್ವಾರ್ಥಕ್ಕಾಗಿ ಯಾರ ಮನೆ ಬಾಗಿಲನ್ನೂ ನಾನು ತಟ್ಟಿಲ್ಲ. ಟಿಕೆಟ್ ಸಿಗುತ್ತೋ, ಸಿಗಲ್ವೋ ಚಾಮುಂಡಿ ನಿರ್ಧರಿಸುತ್ತಾಳೆ. ನನ್ನ ಏಳಿಗೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದ ಸಿಂಹ, 10 ವರ್ಷಗಳ ರಾಜಕಾರಣದ ಬಗ್ಗೆ ಸುದೀರ್ಘ ಮಾತುಗಳನ್ನಾಡಿದರು. ಮಡಿಕೇರಿಯ ಜನರು ನೇರ ಹಾಗೂ ನಿಷ್ಠುರವಾದಿಗಳು. ಆದರೆ, ಮೈಸೂರು ಜನ ರಾಜಕಾರಣ ಮಾಡುವವರು. ಮೈಸೂರಿನಲ್ಲಿರುವಷ್ಟು ರಾಜಕಾರಣ ಎಲ್ಲಿಯೂ ಇಲ್ಲ. ಜನರ ಮಧ್ಯೆ ಇರುವವರಿಗೆ ಪಕ್ಷ ಟಿಕೆಟ್ ನೀಡಬೇಕು. ನನ್ನಿಂದ ಯಾರು ಸಹ ಸೋತಿಲ್ಲ. ನನ್ನ ವಿರುದ್ಧ ಏಕೆ ಇಲ್ಲಸಲ್ಲದ ಆರೋಪ ಮಾಡುತ್ತೀರಿ? ನನ್ನ ಕ್ಷೇತ್ರದಾಚೆಗೂ ಜನ ಪ್ರೀತಿ ವಿಶ್ವಾಸ ತೋರಿಸುತ್ತಿದ್ದಾರೆ. ಈಗಲೂ ಪಕ್ಷ ಟಿಕೆಟ್ ಕೊಡುತ್ತದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.