ಮೈಸೂರು: ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈ ತಪ್ಪುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇದರಿಂದಾಗಿ ಪ್ರತಾಪ್ ಸಿಂಹ ಅವರಿಗೆ ಆಘಾತ ಮತ್ತು ದುಃಖ ತಡೆದುಕೊಳ್ಳುವುದು ಕಷ್ಟವಾಗುತ್ತಿದೆ ಎಂಬಂತೆ ಕಾಣುತ್ತಿದ್ದು, ಕಳೆದ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಪ್ರತಾಪ್ ಸಿಂಹ ಲೈವ್ ಬಂದು ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡರು.
ಇದರ ಬೆನ್ನಲ್ಲೆ ಇಂದು ಬೆಳಗ್ಗೆ ಕೂಡ ಟಿಕೆಟ್ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಟಿಕೆಟ್ ತಪ್ಪಿರುವುದು ಇನ್ನೂ ಖಚಿತವಾಗಿಲ್ಲ, ಸಿಈಸಿ ಸಭೆಯಲ್ಲಿದ್ದವರು ಯಾವ ನಿರ್ಧಾರ ತೆಗೆದುಕೊಂಡಿದ್ದಾರೆ ಅನ್ನೋದು ಗೊತ್ತಾಗಿಲ್ಲ. ಆದರೆ ಟಿಕೆಟ್ ಸಿಗಲಿ ಬಿಡಲಿ, ಜನರು ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಆಭಾರಿಯಾಗಿರುವುದಾಗಿ ಹೇಳಿದರು. ಅಲ್ಲದೆ ಕೇವಲ ಕೊಡಗು-ಮೈಸೂರು ಭಾಗದ ಜನ ಮಾತ್ರವಲ್ಲ, ಕ್ಷೇತ್ರದಾಚೆಯ ಜನ ಸಹ ಪ್ರತಾಪ್ ಸಿಂಹಗೆ ಟಿಕೆಟ್ ಸಿಗಬೇಕು ಅಂತ ಹಾರೈಸುತ್ತಿದ್ದಾರೆ ಮತ್ತು ಪ್ರಾರ್ಥಿಸುತ್ತಿದ್ದಾರೆ, ನನಗೋಸ್ಕರ ಅವರು ಮಾಡುತ್ತಿರುವ ಪ್ರಚಾರ ಟ್ರೆಂಡಿಂಗ್ ಆಗಿದೆ. ಈ ಪಾಟಿ ಜನರ ಪ್ರೀತಿ ಗಳಿಸಿರುವ ನಾನು ನಿಜಕ್ಕೂ ಭಾಗ್ಯಶಾಲಿ, ಟಿಕೆಟ್ ಸಿಗುವ ವಿಶ್ವಾಸ ನನಗಿದೆ ಎಂದು ಹೇಳಿದರು.