ಕಲಬುರಗಿ/ಮಂಗಳೂರು : ರಾಜ್ಯದ ಮತ್ತೇರಡು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್ನ ಅಹಮದಾಬಾದ್ನಿಂದಲೇ ವರ್ಚುವಲ್ ಮೂಲಕ ಕರ್ನಾಟಕದ ಸೇರಿದಂತೆ ದೇಶದ 10 ವಂದೇ ಭಾರತ್ ರೈಲುಗಳಿಗೆ ಮತ್ತು ರೈಲ್ವೆ ಇಲಾಖೆ ವಿವಿಧ ಯೋಜನೆಗಳನ್ನು ಉದ್ಘಾಟಿಸಿದರು. ಈ 10 ರೈಲುಗಳಲ್ಲಿ ಬೆಂಗಳೂರು-ಕಲಬುರಗಿ ಮಧ್ಯೆ ಸಂಚರಿಸುವ ಮತ್ತು ಮಂಗಳೂರು ಸೆಂಟ್ರಲ್ ತನಕ ವಿಸ್ತರಿಸಲಾಗಿರುವ ಕಾಸರಗೋಡು-ತಿರುವನಂತಪುರಂ ನಡುವಿನ ವಂದೇ ಭಾರತ್ ರೈಲುಗಳು ಸೇರಿವೆ.
ಬೆಂಗಳೂರು-ಕಲಬುರಗಿ ನಡುವಿನ ನೂತನ ವಂದೇ ಭಾರತ್ ರೈಲು ಸಂಚಾರ ಇಂದಿನಿಂದ ಆರಂಭವಾಗುವ ಮೂಲಕ ಆ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ಈ ರೈಲು ಕಲಬುರಗಿ ಮತ್ತು ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿರುವ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ಸಂಚರಿಸುತ್ತದೆ. ಕಲಬುರಗಿ-ಎಸ್ಎಂವಿ ಬೆಂಗಳೂರು ನಡುವೆ ರೈಲು ಸಂಖ್ಯೆ 22231 ಮತ್ತು ಎಸ್ಎಂವಿ ಬೆಂಗಳೂರು-ಕಲಬುರಗಿ ನಡುವೆ ರೈಲು ಸಂಖ್ಯೆ 22232 ಗುರುವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳ ಕಾಲ ಸಂಚಾರ ನಡೆಸಲಿದೆ.