ಮಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಗೆ ಟಿಕೆಟ್ ಸಿಗದಿರುವ ಸಾಧ್ಯತೆಯನ್ನು ನಳಿನ್ ಕುಮಾರ್ ಕಟೀಲ್ ಕ್ರೀಡಾಸ್ಫೂರ್ತಿಯಿಂದ ತೆಗೆದು ಕೊಂಡತೆ ಕಾಣುತ್ತಿದೆ. ಇಂದು ಮಂಗಳೂರಲ್ಲಿ ಟಿಕೆಟ್ ವಿಚಾರವಾಗಿ ಮಾತಾಡಿದ ಕಟೀಲ್, ರಾಜಕಾರಣದಲ್ಲಿ ಅಧಿಕಾರವೇ ಮುಖ್ಯವಲ್ಲ, ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ, ಅವರು ಗುಡಿಸು ಅಂದರೆ ಗುಡಿಸುತ್ತೇನೆ, ಒರೆಸು ಅಂತ ಹೇಳಿದರೆ ಒರೆಸುವುದಾಗಿ ಹೇಳಿದರು. ರಾಜಕಾರಣ ಯಾವತ್ತೂ ನಿಂತ ನೀರಲ್ಲ, ನಮ್ಮ ಪಕ್ಷದ ವೈಶಿಷ್ಟ್ಯತೆಯೇ ಅದು, ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಬೆಳೆಸುವುದು. ಪಕ್ಷದ ವರಿಷ್ಠರು ಹೊಸಬರಿಗೆ ಅವಕಾಶ ಕಲ್ಪಿಸಿದರೆ ಅದನ್ನು ಸ್ವಾಗತಿಸುತ್ತೇನೆ. ರಾಷ್ಟ್ರೀಯ ನಾಯಕರು ಯಾವುದೇ ನಿರ್ಣಯ ತೆಗೆದುಕೊಂಡರೂ ಅದನ್ನು ಗೌರವಿಸುತ್ತೇನೆ. ಅಸಲಿಗೆ ಎಲ್ಲ ಬಿಜೆಪಿ ನಾಯಕರ ಗುರಿ ಒಂದೇ ಆಗಿದೆ, ದೇಶದೆಲ್ಲೆಡೆ ಬಿಜೆಪಿ ಜಯಭೇರಿ ಬಾರಿಸಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡುವುದು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.