ಮೈಸೂರು: ತನಗೆ ಈ ಬಾರಿ ಟಿಕೆಟ್ ಸಿಗಲ್ಲ ಅನ್ನೋದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ದೆಹಲಿಯಿಂದ ಬಂದ ಕರೆಯಿಂದ ಖಚಿತವಾದಂತಿದೆ. ಕಾಲ್ ಬರುವ ಮುಂಚೆ ಮಾತಿನಲ್ಲಿದ್ದ ಆರ್ಭಟ ಅದು ಬಂದಾದ ಮೇಲೆ ಮಾಯವಾಗಿತ್ತು. ಮೈಸೂರಿನ ಪತ್ರಕರ್ತರಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2014ರಲ್ಲಿ ಮಾರ್ಚ್ 13ರಂದೇ ಪ್ರಧಾನಿ ಮೋದಿಯವರು ನನಗೆ ಟಿಕೆಟ್ ನೀಡಿದ್ದರು. 2019 ರಲ್ಲಿ ಪುನಃ ಟಿಕೆಟ್ ನೀಡಿ ಒಟ್ಟು 10 ವರ್ಷಗಳ ಕಾಲ ಕೊಡಗು-ಮೈಸೂರು ಜನರ ಸೇವೆ ಮಾಡುವ ಅವಕಾಶ ಕಲ್ಪಿಸಿದರು. ಅವರು ಅವಕಾಶ ನೀಡಿರದಿದ್ರೆ ಇಷ್ಟೆಲ್ಲ ಕೆಲಸ ಮಾಡಬಲ್ಲೆ ಅನ್ನೋದು ಜನರಿಗೆ ಗೊತ್ತಾಗುತ್ತಿರಲಿಲ್ಲ. ಈ ಬಾರಿ ಟಿಕೆಟ್ ಸಿಗುತ್ತೋ ಇಲ್ಲವೋ ಗೊತ್ತಿಲ್ಲ, ಇನ್ನೊಂದು ಅವಧಿಗೆ ಸೇವೆ ಮಾಡುವ ಅವಕಾಶ ಕೊಡಿ ಅಂತ ಮನವಿ ಮಾಡಿದ್ದೆ, ಮೂರನೇ ಅವಧಿಯಲ್ಲಿ ಯುವಕರನ್ನು ಬೆಳೆಸಿ ರಾಜಕೀಯಕ್ಕೆ ವಿದಾಯ ಹೇಳಬೇಕೆಂದುಕೊಂಡಿದ್ದೆ, ಕೊನೆಯವರೆಗೂ ರಾಜಕಾರಣಿಯಾಗಿ ಉಳಿಯುವುದು ನನಗೆ ಇಷ್ಟವಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು. ದೇಶಕ್ಕೆ ಮೋದಿ ಜೀ ಅವರು ಬೇಕು, ಹಾಗಾಗಿ ಮೈಸೂರು ಮಹಾರಾಜರಿಗೆ ಟಿಕೆಟ್ ಕೊಟ್ಟರೆ ಎಲ್ಲ ಕಾರ್ಯಕರ್ತರು ಒಟ್ಟಾಗಿ ಅವರ ಗೆಲುವಿಗೆ ಶ್ರಮಿಸಬೇಕು, ನಾನಂತೂ ನಿರಾಶನಾಗಲ್ಲ, ಮೊದಲಿನಂತೆಯೇ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದರು.