ಬೆಂಗಳೂರು: ನಮ್ಮ ನೋವು ಅರ್ಥವಾದರೆ ಜೀವಂತವಾಗಿದ್ದೇವೆ, ಬೇರೆಯವರ ನೋವು ಅರ್ಥವಾದರೆ ಮನುಷ್ಯರಾಗಿದ್ದೇವೆ ಎಂದರ್ಥ ಎಂದು ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ಹೇಳಿದ್ದಾರೆ. ಆರ್ ಆರ್ ವಿಧಾನಸಭಾ ಕ್ಷೇತ್ರದಲ್ಲಿ ಮಾತಾಡಿದ ಅವರು, ಚುನಾವಣೆ ಮತ್ತು ರಾಜಕಾರಣದಲ್ಲಿ ಪರಸ್ಪರ ಟೀಕೆ ನಿಂದನೆಗಳು ಬೇಡ, ಅವು ಕೇವಲ ಮಾಧ್ಯಮಗಳಿಗೆ ಆಹಾರವಾಗುತ್ತವೆಯೇ ಹೊರತು ನಮಗೆ ಪ್ರಯೋಜನ ವಾಗುವುದಿಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಮುಖ್ಯಮಂತ್ರಿಯಾಗಿ ಹೆಚ್ ಡಿ ಕುಮಾರಸ್ವಾಮಿಯವರು ಮಾಡಿರುವ ಸಾಧನೆಗಳ ಮೇಲೆ ಚುನಾವಣೆ ಎದುರಿಸೋಣ. ವಾಟ್ಸ್ಯಾಪ್ ಯೂನಿವರ್ಸಿಟಿಯಲ್ಲಿ ಹರಿದಾಡುವ ಸುಳ್ಳುಗಳನ್ನು ನಂಬಿ ನಾವು ಬದುಕುವುದು ಬೇಡ, ಸತ್ಯಕ್ಕೆ ಸಾಕ್ಷಿ ಕೇಳುವ ಕಾಲಘಟ್ಟದಲ್ಲಿ ನಾವು ಜೀವಿಸುತ್ತಿದ್ದೇವೆ ಎಂದು ಹೇಳಿದರು.