ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಒಡೆಯರ್ ಹೆಸರು ಘೋಷಣೆಯಾಗುತ್ತಿದ್ದಂತೆ ಬಿಜೆಪಿ, ಜೆಡಿಎಸ್ ನಾಯಕರ ಮನೆಗಳಿಗೆ ಯದುವೀರ್ ಭೇಟಿ ನೀಡಿದ್ದಾರೆ. ಈ ಸಂಬಂಧ ಮೈಸೂರಿನಲ್ಲಿ ಸಾಲು ಸಾಲು ಬಿಜೆಪಿ ನಾಯಕರ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಎಸಿ ರೂಂ ಬಿಟ್ಟು ಬೀದಿಗೆ ಬರಬೇಕಾಗುತ್ತೆ ಎಂದಿದ್ದ ಸಂಸದ ಪ್ರತಾಪ್ ಸಿಂಹ ಹೇಳಿಕೆಗಳಿಗೆ ಯದುವೀರ್ ಅವರು ಆರಂಭದಲ್ಲೇ ಉತ್ತರ ಕೊಟ್ಟಂತೆ ಎದ್ದು ಕಾಣುತ್ತಿದೆ. ಮೊದಲ ದಿನವೇ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಮಾಜಿ ಸಚಿವ ಎಸ್.ಎ. ರಾಮದಾಸ್ ಮನೆಗೆ ಭೇಟಿ ನೀಡಿದ್ದಾರೆ. ಜೊತೆಗೆ ಜೆಡಿಎಸ್ ನಾಯಕ ಜಿ.ಟಿ.ದೇವೇಗೌಡರನ್ನು ಭೇಟಿಯಾಗಿ ಸಹಕಾರವನ್ನು ಕೋರಿದ್ದಾರೆ. ಇದರೊಂದಿಗೆ ಯದುವೀರ್ ಅವರು ಫುಟ್ ಪಾತ್ ನಲ್ಲಿ ಕಾರ್ಯಕರ್ತರ ಜತೆ ಕುಳಿತು ಸಾಮಾನ್ಯರಂತೆ ಟೀ ಕುಡಿದಿದ್ದಾರೆ. ಬಹಳ ಉತ್ಸುಕತೆಯಿಂದ ಚುನಾವಣೆಯಲ್ಲಿ ಓಡಾಟ ನಡೆಸುತ್ತಿರುವ ರಾಜವಂಶಸ್ಥ ಯದುವೀರ್, ತಮ್ಮ ನಡೆಯ ಮೂಲಕ ಜನರ ಮಧ್ಯೆ ಇರುತ್ತೇನೆಂಬ ಸಂದೇಶ ರವಾನಿಸಿದ್ಧಾರೆ. ಬೆಳಗ್ಗೆ 11.30ಕ್ಕೆ ಮಾಜಿ ಸಚಿವ ಸಾ.ರಾ. ಮಹೇಶ್ ಭೇಟಿ ಮಾಡಲಿದ್ದಾರೆ. ಮಧ್ಯಾಹ್ನ ಚಾಮರಾಜಪುರಂ ಬಿಜೆಪಿ ಕಚೇರಿ ಸೇರಿದಂತೆ ಸಂಜೆ 5 ಗಂಟೆಗೆ ಮೈಸೂರಿನ ಜಯಲಕ್ಷ್ಮಿಪುರಂ ನಲ್ಲಿರುವ ವಿ.ಶ್ರೀನಿವಾಸ ಪ್ರಸಾದ್ ಅವರ ಮನೆಗೆ ಭೇಟಿ ನೀಡಲಿದ್ದಾರೆ. ಟಿಕೆಟ್ ಘೋಷಣೆ ಬಳಿಕ ಎಲ್ಲಾ ನಾಯಕರ ವಿಶ್ವಾಸ ತೆಗೆದುಕೊಳ್ಳಲು ಮುಂದಾಗಿರುವ ಯದುವೀರ್ ಕ್ಷೇತ್ರದಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದಾರೆ.