ಕಾಂಗ್ರೆಸ್ ಪಕ್ಷಕ್ಕೂ ಮೊದಲು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡುವ ಮೂಲಕ ಕೈ ಪಕ್ಷಕ್ಕೆ ಬಿಜೆಪಿ ಟೆನ್ಶನ್ ಕೊಟ್ಟಿದೆ. ಶೋಭಾ ಕರಂದ್ಲಾಜೆಗೆ ಟಿಕೆಟ್ ಸಿಗಬಹುದು ಎಂದು ಕಾಂಗ್ರೆಸ್ ಲೆಕ್ಕಾಹಾರ ಹಾಕಿ, ಜಯಪ್ರಕಾಶ್ ಹೆಗ್ಡೆ ಅವರನ್ನು ಪಕ್ಷಕ್ಕೆ ಸೆಳೆದುಕೊಂಡಿತ್ತು. ಆದರೆ ಈ ನಡುವೆ ಹಿಂದುಳಿದ ವರ್ಗದ ನಾಯಕನಿಗೆ ಟಿಕೆಟ್ ಕೊಟ್ಟು ಬಿಜೆಪಿ ರಾಜಕೀಯ ದಾಳ ಉರುಳಿಸಿದೆ. ಕಾಂಗ್ರೆಸ್ ಮತ್ತೆ ಹೊಸದಾಗಿ ಕೂಡಿ-ಕಳೆಯುವ ಲೆಕ್ಕಾಚಾರ ಮಾಡಬೇಕಿದೆ.
ಅನಿರೀಕ್ಷಿತ ಅಚ್ಚರಿ ಎಂಬಂತೆ ಕೋಟ ಶ್ರೀನಿವಾಸ ಪೂಜಾರಿಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲಾಗಿದೆ. ಹೀಗೆ ಹೊಸ ಅಭ್ಯರ್ಥಿ ಘೋಷಣೆ ಮಾಡಿ ಕಾಂಗ್ರೆಸ್ ಗೆ ಟೆನ್ಶನ್ ಕೊಟ್ಟಿದೆ. ಜಾತಿ ಲೆಕ್ಕಾಚಾರ ಮಾಡಿ ಬಿಜೆಪಿ ಟಿಕೆಟ್ ನೀಡಿದ್ದು, ಕಾಂಗ್ರೆಸ್ ಅನಿವಾರ್ಯವಾಗಿ ಹೊಸ ಲೆಕ್ಕ ಶುರು ಮಾಡಿದೆ. ಬಿಜೆಪಿ ಗೌಡ ಸಮುದಾಯದ ಶೋಭಾ ಕರಂದ್ಲಾಜೆ ಗೆ ಟಿಕೆಟ್ ಎಂದು ಭಾವಿಸಿದ್ದ ಕಾಂಗ್ರೆಸ್, ಬಂಟ ಸಮುದಾಯದ ಜಯಪ್ರಕಾಶ್ ಹೆಗ್ಡೆಯನ್ನು ಪಕ್ಷಕ್ಕೆ ಸೆಳೆದಿತ್ತು. ಬದಲಾದ ಪರಿಸ್ಥಿತಿಯಲ್ಲಿ ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರಕ್ಕೆ ಶಿಫ್ಟ್ ಆಗಿದ್ದು, ಶೋಭಾ ಸ್ಥಾನಕ್ಕೆ ಶ್ರೀನಿವಾಸ ಪೂಜಾರಿ ನಿಂತಿದ್ದಾರೆ.