ಪ್ರತಿನಿಧಿ ವರದಿ ಹುಣಸೂರು
ಹುಣಸೂರು ತಾಲೂಕು ಕೃಷಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ದ ವತಿಯಿಂದ ೪೯ ಲಕ್ಷ ರೂ.ಗಳ ವೆಚ್ಚದಡಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಶಾಸಕ ಜಿ.ಡಿ.ಹರೀಶ್ ಗೌಡ ಗುದ್ದಲಿಪೂಜೆ ನೆರವೇರಿಸಿದರು.
ಶನಿವಾರ ನಗರದ ಟಿಎಪಿಸಿಎಂಎಸ್ನ ಹಳೆಯ ವಾಣಿಜ್ಯ ಸಂಕೀರ್ಣ ವ್ಯಾಪ್ತಿಯ ಅಕ್ಕಿಗಿರಣಿಯ ಮುಂಭಾಗದಲ್ಲಿ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಕಳೆದೊಂದು ವರ್ಷದಲ್ಲಿ ಟಿಎಪಿಸಿಎಂಎಸ್ ವತಿಯಿಂದ ಒಟ್ಟು ೧ ಕೋಟಿ ರೂ.ಗಳ ವೆಚ್ಚದಡಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುತ್ತಿದೆ. ೬ ತಿಂಗಳ ಹಿಂದೆ ಆರಂಭಗೊಂಡ ೧೦ ಮಳಿಗೆಗಳ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದೆ. ಇದೀಗ ಮತ್ತೆ ೧೦ ಮಳಿಗೆಗೆಳನ್ನು ನಿರ್ಮಿಸಲಾಗುತ್ತಿದೆ. ಟಿಎಪಿಸಿಎಂಎಸ್ ಸಹಕಾರ ಸಂಸ್ಥೆಯನ್ನು ಅಭಿವೃದ್ಧಿಪಡಿಸುವುದಾಗಿ ವರ್ಷದ ಹಿಂದೆ ಮಾತುಕೊಟ್ಟಿದೆ. ಇದೀಗ ಷೇರುದಾರರಿಗೆ ಲಾಭದಾಯಕವಾಗುವಂತೆ ಕ್ರಮವಹಿಸಿದ್ದೇನೆ ಎಂದರು.
ಟಿಎಪಿಸಿಎಂಎಸ್ನ ೬೦ ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಲಿತ ಸಮಾಜದ ಹಿರಿಯ ಮುಖಂಡ ಬಸವಲಿಂಗಯ್ಯರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅಲ್ಲದೇ ಉಪಾಧ್ಯಕ್ಷರಾಗಿ ವಾಲ್ಮೀಕಿ ಸಮಾಜದ ನಾಗರಾಜುರನ್ನು ಆಯ್ಕೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದೇವೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಹಿರಿಯ ಮುಖಂಡ ಬಸವಲಿಂಗಯ್ಯರ ಅಧ್ಯಕ್ಷತೆಯಲ್ಲಿ ಒಂದು ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿ ನಡೆದಿರುವುದು ಎಲ್ಲರ ಹೆಮ್ಮೆಗೆ ಕಾರಣವಾಗಿದೆ. ಹಾಲಿ ಇರುವ ರೈತಭವನದ ಅಭಿವೃದ್ಧಿಗೂ ಕ್ರಮವಹಿಸಲಾಗುವುದು ಎಂದರು.
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿಕೇಟ್ ಹಾಲಿ ಸಂಸದ ಪ್ರತಾಪ್ಸಿಂಹರ ಕೈತಪ್ಪಿರುವುದರ ಬಗ್ಗೆ ಪತ್ರಕರ್ತರ ಗಮನಸೆಳೆದಾಗ, ತಾವು ಈ ಕುರಿತು ಪ್ರತಿಕ್ರಿಯೆ ನೀಡುವುದು ತರವಲ್ಲ. ಅದು ಬಿಜೆಪಿ ಪಕ್ಷದ ಆಂತರೀಕ ವಿಚಾರ. ಆದರ ಪ್ರತಾಪ್ಸಿಂಹ ಸಂಸದರಾಗಿ ಹುಣಸೂರು ತಾಲೂಕಿಗೆ ಮತ್ತು ಸಂಸದ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮೈಸೂರು ಕುಶಾಲನಗರ ರೈಲ್ವೆ ಯೋಜನೆ, ಹುಣಸೂರು ಬೈಪಾಸ್ ರಸ್ತೆ ಅಭಿವೃದ್ಧಿಗೆ ವಾರದ ಹಿಂದೆ ೮೬ ಕೋಟಿ ರೂ.ಗಳ ಯೋಜನೆ ಜಾರಿ, ಮರದೂರು ಏತ ನೀರಾವರಿ ಯೋಜನೆ, ಕಾವೇರಿ ಕುಡಿಯುವ ನೀರಿನ ಯೋಜನೆ ಹೀಗೆ ನೂರಾರು ಕೋಟಿ ರೂ.ಗಳ ಅಬಿವೃದ್ಧಿ ಯೋಜನೆ ಹುಣಸೂರಿಗೆ ನೀಡಿದ್ದಾರೆ. ಅವರಿಗೆ ಟಿಕೇಟ್ ಸಿಗಬಹುದೆಂಬ ನಿರೀಕ್ಷೆ ಎಲ್ಲರಲ್ಲಿತ್ತು. ಆದರೆ ಅವರ ಪಕ್ಷ ತೀರ್ಮಾನಿಸಿದೆ. ಬಿಜೆಪಿ ಜೆಡಿಎಸ್ ಮೈತ್ರಿಪಕ್ಷವಾಗಿ ನಾವು ಮೈತ್ರಿಧರ್ಮ ಪಾಲನೆ ಮಾಡುತ್ತೇವೆ. ನಿಯೋಜಿತ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ರನ್ನು ಜೆಡಿಎಸ್ ಬೆಂಬಲಿಸಲಿದೆ ಎಂದು ತಿಳಿಸಿದರು.
ಅಧ್ಯಕ್ಷ ಬಸವಲಿಂಗಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಪ್ರೇಮ್ಕುಮಾರ್, ವೆಂಕಟೇಶ್, ಎಚ್.ಟಿ. ಬಾಬು, ಅಸ್ವಾಳು ಕೆಂಪೇಗೌಡ, ಗೌರಮ್ಮ, ಮಂಗಳಗೌರಮ್ಮ, ರೇವಣ್ಣ, ಕಾರ್ಯದರ್ಶಿ ಹೇಮಾ ಸೇರಿದಂತೆ ಷೇರುದಾರರು ಹಾಜರಿದ್ದರು.
೧೬ಊUಓ೨: ಹುಣಸೂರು ನಗರದ ಟಿಎಪಿಸಿಎಂಎಸ್ ವತಿಯಿಂದ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಶಾಸಕ ಜಿ.ಡಿ.ಹರೀಶ್ಗೌಡ ಗುದ್ದಲಿಪೂಜೆ ನೆರವೇರಿಸಿದರು. ಅಧ್ಯಕ್ಷ ಬಸವಲಿಂಗಯ್ಯ, ಉಪಾಧ್ಯಕ್ಷ ನಾಗರಾಜು, ನಿರ್ದೇಶಕರಾದ ಅಸ್ವಾಳು ಕೆಂಪೇಗೌಡ, ಬಾಬು, ವೆಂಕಟೇಶ್ ಇತರರಿದ್ದಾರೆ.