ಸಹಜ ಕೃಷಿ ವಿಜ್ಞಾನಿ ಡಾ. ಮಂಜುನಾಥ್ ಬೇಸರ
ಗುಂಡ್ಲುಪೇಟೆ: ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯದ ಪರಿಣಾಮಗಳು ಹೆಚ್ಚಾಗಿದೆ. ವಿಪರೀತ ಮಳೆ ಅಥವಾ ಮಳೆಯಿಲ್ಲದ ಕಾರಣದಿಂದ ಒಣಭೂಮಿಯ ಬೆಳೆಗಳು ಫಲ ಬಿಡುತ್ತಿಲ್ಲ ಎಂದು ಸಹಜ ಕೃಷಿ ವಿಜ್ಞಾನಿ ಡಾ. ಮಂಜುನಾಥ್ ತಿಳಿಸಿದರು.
ಜೆ.ಎಸ್.ಬಿ. ಪ್ರತಿಷ್ಠಾನದ ವತಿಯಿಂದ ಗುಂಡ್ಲುಪೇಟೆ ತಾಲೂಕಿನ ಕರಕಲ ಮಾದಹಳ್ಳಿಯ ರೈತ ಸಂಪತ್ ಅವರ ತೋಟದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೇಸಿಗೆಯಲ್ಲಿ ತೋಟಗಳ ನಿರ್ವಹಣೆ, ಕ್ಷೇತ್ರ ಪ್ರಾತ್ಯಕ್ಷಿಕೆ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ಪರಾಗಸ್ಪರ್ಶಕ್ಕೂ ತೊಂದರೆಯಾಗುತ್ತಿದೆ ಮತ್ತು ಬಿಸಿಲಿನ ತೀವ್ರತೆಯೂ, ಕೊರತೆಯೂ ಕಾರಣವಾಗುತ್ತದೆ. ತೆಂಗು, ಹಲಸು, ಮಾವು ಈ ವರ್ಷ ತೋಟಗಳಲ್ಲಿ ಕೈಕೊಟ್ಟಿವೆ. ತೆಂಗಿನ ಇಳುವರಿ ಬಹಳ ಕಡಿಮೆಯಾಗಿದೆ. ಹವಾಮಾನ ವೈಪರೀತ್ಯದ ಕಾರಣ ರೈತರು ಹೆಚ್ಚು ಹೆಚ್ಚು ರಾಸಾಯನಿಕಗಳನ್ನು ಕೃಷಿಯಲ್ಲಿ ಬಳಸುತ್ತಿದ್ದಾರೆ. ಇದರಿಂದ ಗ್ರಾಹಕನ ಹೊಟ್ಟೆಗೆ ರಾಸಾಯನಿಕಗಳು ಸೇರುತ್ತಿವೆ.
ಹವಾಮಾನ ಬದಲಾವಣೆ ಎದುರಿಸುವತ್ತಾ ಯೋಚಿಸಿ, ಕಾರ್ಯಪ್ರವೃತ್ತರಾಗಬೇಕಿದ್ದ ಕೃಷಿ ವಿಶ್ವವಿದ್ಯಾಲಯಗಳು, ಸರ್ಕಾರಿ ಇಲಾಖೆಗಳು ಅಷ್ಟಾಗಿ ಕೆಲಸ ಮಾಡುತ್ತಿಲ್ಲ. ಅದ್ದರಿಂದ ರೈತರು ಅವರಿವರನ್ನು ಕಾಯುತ್ತಾ ಕೂರುವ ಬದಲು, ಸ್ವತಃ ತಾವೇ ಹವಾಮಾನ ಬದಲಾವಣೆ ಎದುರಿಸಲು ಕಾರ್ಯಪ್ರವೃತ್ತವಾಗಬೇಕಿದೆ ಎಂದು ಕರೆಕೊಟ್ಟರು.
ಕಾರ್ಯಾಗಾರ: ತೋಟಗಳಲ್ಲಿ ಕೃಷಿ ಬೆಳೆಗಳ ವಿನ್ಯಾಸ – ತೆಂಗು, ಮಾವು ಮತ್ತಿತರ ತೋಟಗಾರಿಕೆ ಬೆಳೆಗಳ ಬಗ್ಗೆ, ಅವುಗಳ ವಿನ್ಯಾಸದ ಬಗ್ಗೆ, ಬೆಳೆಗಳ ಸಂಯೋಜನೆ ಬಗ್ಗೆ ಮಾಹಿತಿ ವಿನಿಮಯ. ತೋಟಗಳು ಇಂದು ಬೇಸಿಗೆಯ ಬಿಸಿಲಿನಿಂದ ಬಳಲಿದ್ದು, ಸೂಕ್ಷ್ಮ ಪೋಷಕಾಂಶಗಳು ಕೊರತೆ ಹೆಚ್ಚಾಗಿದ್ದು, ಈ ಕೊರತೆಯಿಂದ ತೋಟಗಾರಿಕೆ ಬೆಳೆಗಳ ಇಳುವರಿ ಪ್ರಮಾಣ ಗಣನೀಯವಾಗಿ ಕುಸಿದಿದೆ. ಈ ವಾಯುಗುಣ ವೈಪರೀತ್ಯದಿಂದ ಕೃಷಿಯ ಬಿಕ್ಕಟ್ಟು, ರೈತನ ಸಮಸ್ಯೆಗಳು ಬಿಗಡಾಯಿಸುತ್ತಾ ಇದೆ. ಈ ಕಾರಣದಿಂದ ಸ್ಥಳೀಯ ಕೃಷಿಕರು ಸಮಷ್ಟಿಯ ದೃಷ್ಟಿಕೋನವನ್ನು ಅರಿತು, ಪರಿಸರಕ್ಕೆ ಪೂರಕವಾಗಿ ಬೆಳೆಗಳನ್ನು ಬೆಳೆಯುವ ಕೆಲಸವನ್ನು ಹೇಗೆ ಮಾಡಬೇಕೆಂದು ತಿಳಿಸಿದರು.
ನೀರಿನ ಮಿತ ಬಳಕೆ, ಮಣ್ಣಿನ ಸೂಕ್ಷ್ಮ ಪೋಷಕಾಂಶಗಳ ಸಂರಕ್ಷಣೆ ಮತ್ತು ನಿರ್ವಹಣೆ, ಜೀವಾಣುಗಳು ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಸಹಜ ಬೇಸಾಯ ಪದ್ಧತಿಯು ಇಂದು ರೈತರಿಗೆ ಹೇಗೆ ಆಶಾಕಿರಣವಾಗಿದೆ ಎಂದು ತಿಳಿಸಲಾಯಿತು.
ರೈತ ಸಂಘದ ಹೊನ್ನೂರು ಪ್ರಕಾಶ, ಜೆಎಸ್’ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ, ಪ್ರೇಮ, ಶ್ರೀಕಾಂತ, ಪೂರ್ಣಿಮಾ, ಶಿವಬಸಪ್ಪ, ಕಮಲಮ್ಮ, ನಾಗರಾಜು, ಭಾನು, ಗಿರೀಶ, ಗುರುಸ್ವಾಮಿ, ಗಿರಿ, ಸುಬ್ರಹ್ಮಣ್ಯ, ಮರುಡೇಶ, ಚಂದ್ರಶೇಖರಯ್ಯ, ದೀಪ, ದೇವರಾಜು ಗ್ರಾಮಸ್ಥರಿದ್ದರು.
ಫೋಟೋ ಇದೆ