ಚಿಕ್ಕಬಳ್ಳಾಪುರ: ಪೋಷಕರು ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ಹೂಡುವ ಹೂಡಿಕೆ ಇಂದಲ್ಲ ನಾಳೆ ಎಂದಿದ್ದರೂ ಉತ್ತಮ ಪ್ರತಿಫಲವನ್ನು ನೀಡುತ್ತದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ತಿಳಿಸಿದರು.
ಮುದ್ದೇನಹಳ್ಳಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಗ್ರಂಥಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರಿಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಯಾವುದೇ ದೇಶದ ಅಭಿವೃದ್ಧಿ ಅಳೆಯಬೇಕಾದರೆ ಹೆಣ್ಣುಮಕ್ಕಳ ಸ್ಥಿತಿಗತಿಗಳನ್ನು ಪ್ರಮುಖವಾಗಿ ಪರಿಗಣಿಸಬೇಕು ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ತಿಳಿಸಿದ್ದಾರೆ.
ಅಧಿಕಾರ ಮತ್ತು ಸಂಪತ್ತುಗಳ ಹಂಚಿಕೆ ವಿಚಾರದಲ್ಲಿ ಹೆಣ್ಣುಮಕ್ಕಳು ಅಲ್ಪಸಂಖ್ಯಾತರಾಗಿ ಅವಕಾಶ ವಂಚಿತರಾಗುತ್ತಿದ್ದಾರೆ. 21ನೇ ಶತಮಾನದಲ್ಲಿಯೂ ಹೆಣ್ಣುಮಕ್ಕಳು ಹಕ್ಕುಗಳಿಗಾಗಿ ಹೋರಾಡುತ್ತಿರುವುದು ಶೋಚನೀಯ ಸಂಗತಿ. ಆದರೂ ಹೆಣ್ಣುಮಕ್ಕಳು ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ದಾಪುಗಾಲು ಹಾಕುತ್ತಿದ್ದಾರೆ ಎಂದು ನುಡಿದರು.
ಇಂದಿಗೂ ಹೆಣ್ಣುಮಕ್ಕಳು ಶೋಷಣೆಗೆ ಒಳಗಾಗುತ್ತಿದ್ದು, ಅವರ ಸಮಾನತೆಯ ಹಕ್ಕುಗಳಿಗೆ ಮನೆಯಿಂದಲೇ ಸ್ಫೂರ್ತಿ ತುಂಬಬೇಕು. ಗ್ರಾಮೀಣ ವಿದ್ಯಾರ್ಥಿಗಳು ಸಾಧಕರಾಗಲು ಅರ್ಹತೆಗಳನ್ನು ಹೊಂದಿದ್ದು, ಅದರಲ್ಲೂ ಗ್ರಾಮೀಣ ಹೆಣ್ಣುಮಕ್ಕಳಲ್ಲಿ ಆತ್ಮಸ್ಥೈರ್ಯ ಮತ್ತು ಆತ್ಮಾಭಿಮಾನ ಹೆಚ್ಚಾಗಿರುತ್ತದೆ. ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳು ಸಾಧನೆಯ ಹಾದಿಯಲ್ಲಿ ಇಟ್ಟ ಹೆಜ್ಜೆಯನ್ನು ಹಿಂತೆಗೆಯಬಾರದು. 21ಶತಮಾನದಲ್ಲಿ ಸಾಧನೆಗೆ ಬಹಳಷ್ಟು ಅವಕಾಶಗಳಿದ್ದು, ಅವುಗಳನ್ನೇ ಬಳಸಿಕೊಂಡು ಎತ್ತರಕ್ಕೇರಬೇಕು ಎಂದು ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ, ಉತ್ಸಾಹ ತುಂಬಿದರು.
ಶತಮಾನದ ಕ್ರಾಂತಿಕಾರಿ ವಚನಕಾರ ಬಸವಣ್ಣನವರು ಹಾಗೂ ಸಮಾನತೆಯ ಹರಿಕಾರ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳನ್ನು ಅರ್ಥೈಸಿಕೊಂಡು ಸಾಧಕರಾಗುವತ್ತ ದಿಟ್ಟ ಹೆಜ್ಜೆ ಹಾಕುವ ಮೂಲಕ ಇತರರಿಗೂ ಮಾದರಿಯಾಗಬೇಕು. ಅಡ್ಡಿ ಆತಂಕ, ಅಡೆತಡೆಗಳನ್ನೂ ಮೀರಿ ಹೆಣ್ಣುಮಕ್ಕಳು ಬೆಳೆಯಬೇಕು ಎಂದು ಸಲಹೆ ನೀಡಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಯೋಜಕ ಜಿ.ಎಸ್.ವೆಂಕಟೇಶ್, ಮಹಿಳಾ ಸಬಲೀಕರಣ ಸಮಿತಿ ಅಧಕ್ಷೆ ಟಿ.ಸಿ.ತನುಜಾ, ಸದಸ್ಯೆ ನಿರ್ಮಲ ಹಿರೇಮಠ ಇದ್ದರು.