ಮಡಿಕೇರಿ: ಕಾವೇರಿ ಜಲ ಉದ್ಭವಿಸುವ ಕೊಡಗು ಜಿಲ್ಲೆ ಕಾವೇರಿ ನದಿ ನೀರು ಬಳಸಬಾರದು ಎಂದು ಜಿಲ್ಲಾಡಳಿತ ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆ ಬಹುಸಂಖ್ಯಾತ ಆಡಳಿತಶಾಹಿಗಳು ಕೊಡವರ ಹಕ್ಕುಗಳನ್ನು ಕಸಿದುಕೊಳ್ಳುವ ಯತ್ನವಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು 1956 ರಲ್ಲಿ ಕೂರ್ಗ್ ರಾಜ್ಯ ಕರ್ನಾಟಕದೊಂದಿಗೆ ವಿಲೀನವಾದ ನಂತರ ಹಲವು ಕರಾಳ ಕಾಯ್ದೆ ಮೂಲಕ ನಿರಂತರವಾಗಿ ವಂಚನೆ ಮಾಡಿ ಕೊಡವರನ್ನು ಶೋಷಿಸಲಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಕಾವೇರಿ ನದಿಯ ನೀರನ್ನು ಬಳಸಬಾರದೆಂದು ಜಿಲ್ಲಾಡಳಿತ ಇತ್ತೀಚೆಗೆ ಹೊರಡಿಸಿರುವ ಆದೇಶ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರಕಾರ ಕೊಡಗನ್ನು ಕರ್ನಾಟಕಕ್ಕೆ ಕಪ್ಪ ಒಪ್ಪಿಸುವ ಸಾಮಂತನೆಂದು, ಮೈಸೂರಿಗರು ಕೊಡಗನ್ನು ಯುದ್ಧದಲ್ಲಿ ಗೆದ್ದ ಆಕ್ರಮಿತ ವಸಹಾತು ಎಂದು, ಇಲ್ಲಿನ ಸರ್ವ ಉತ್ಪಾದನೆಯ ಹಕ್ಕುದಾರಿಕೆ ಕೊಡವರದಲ್ಲವೆಂದು, ಕೊಡವರು ಕೇವಲ ಅವರ ಅಧೀನ ಪ್ರಜೆಗಳೆಂಬ ಭಾವನೆ ಇದ್ದಂತಿದೆ. ಇದು ದೌರ್ಜನ್ಯಕಾರಿ, ಜನವಿರೋಧಿ, ಆಕ್ರಮಣಕಾರಿ, ಪ್ರಜಾತಂತ್ರ ವಿರೋಧಿ ನಿಲುವಾಗಿದೆ ಎಂದು ಆರೋಪಿಸಿದ್ದಾರೆ.
ಕೊಡಗು ಕಾವೇರಿ ಜಲ ಉತ್ಪಾದಿಸುವ ಪ್ರಮುಖ ಕ್ಯಾಚ್ಮೆಂಟ್ ಏರಿಯಾ ಆಗಿದ್ದು, ಕಾವೇರಿ ನದಿಯ ನೀರಿನ ವಾರ್ಷಿಕ ಇಳುವರಿ 740 ಟಿ.ಎಂ.ಸಿ ಆಗಿದೆ. ಇದರಲ್ಲಿ ಕೊಡಗಿನ ಉತ್ಪಾದನೆ 200 ಟಿ.ಎಂ.ಸಿ.ಆಗಿದೆ. 1966ರಲ್ಲಿ ವಿಶ್ವ ರಾಷ್ಟ್ರ ಸಂಸ್ಥೆ ಮಧ್ಯಸ್ಥಿಕೆಯಲ್ಲಿ ಫಿನ್ಲ್ಯಾಂಡ್ನ ಹೆಲ್ಸಿಂಕಿಯಲ್ಲಿ ನಡೆದ ಅಂತಾರಾಷ್ಟ್ರೀಯ ಜಲವಿವಾದ ಒಪ್ಪಂದದಲ್ಲಿ ಜಲ ಉತ್ಪತ್ತಿಯಾಗುವ ಸ್ಥಳಕ್ಕೆ ನೀರಿನ ಅಧಿಕ ಪಾಲು ನೀಡಬೇಕೆಂಬ ಘೋಷಣೆ ಹೊರಡಿಸಲಾಗಿದೆ. ಆದರೆ ಕೊಡಗಿನ ವಿಷಯದಲ್ಲಿ ಈ ಹೆಲ್ಸಿಂಕಿ ನಿಯಮವನ್ನು ರಾಜ್ಯ ಸರ್ಕಾರ ಉಲ್ಲಂಘನೆ ಮಾಡಿ ನಮಗೆ ವಂಚಿಸಿದೆ ಎಂದು ಟೀಕಿಸಿದ್ದಾರೆ.
ಯಾವುದೇ ಕಾರಣಕ್ಕೂ ಆಡಳಿತಶಾಹಿಗಳು ಅತಿಸೂಕ್ಷ್ಮ ಆದಿಮ ಸಂಜಾತ ಬುಡಕಟ್ಟು ಕೊಡವರ ಜಲಮೂಲದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಬಾರದು ಎಂದು ನಾಚಪ್ಪ ಒತ್ತಾಯಿಸಿದ್ದಾರೆ. ಫೋಟೋ :: ನಾಚಪ್ಪ
Leave a comment