ಮಂಗಳೂರು : ಮತದಾರ ಯಾವತ್ತೂ ಪಕ್ಷಗಳನ್ನು ನೋಡಿ ತಮ್ಮ ಮತ ಚಲಾಯಿಸದೆ ಅಭ್ಯರ್ಥಿಯನ್ನು ನೋಡಿ ವೋಟು ಮಾಡಬೇಕು ಎಂದು ಹಿರಿಯ ನಟ ಪ್ರಕಾಶ್ ರಾಜ್ ಹೇಳಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಯದುವೀರ್ ಒಡೆಯರ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಜಾಪ್ರಭುತ್ವದ ಸೊಬಗೇ ಅದು, ನಮಗೆ ಸೂಕ್ತ ಅನಿಸಿದ ವ್ಯಕ್ತಿಯನ್ನು ನಮ್ಮ ಪ್ರತಿನಿಧಿಯಾಗಿ ಆರಿಸಿಕೊಳ್ಳುವುದು, ಅಭ್ಯರ್ಥಿ ಯಾವ ಪಕ್ಷ ಪ್ರತಿನಿಧಿಸುತ್ತಾನೆ ಅನ್ನೋದು ಬೇರೆ ವಿಷಯ. ಆದರೆ ಅವನು ನಮ್ಮ ನಿಯೋಜಕ ವರ್ಗವನ್ನು ಪ್ರತಿನಿಧಿಸುತ್ತಾನೆಯೇ? ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಾನೆಯೇ..? ನಮಗೆ ಅವಶ್ಯವಿರುವ ಸಮಯದಲ್ಲಿ ಕೈಗೆ ಸಿಗುತ್ತಾನೆಯೇ ಎಂಬುವುದನ್ನು ಯೋಚಿಸಬೇಕು. ನಾವು ಆರಿಸಿ ಕಳಿಸುವ ವ್ಯಕ್ತಿ ನಮ್ಮವನಾಗಿರಬೇಕು, ಸದಾ ನಮ್ಮ ಜೊತೆಯಿರಬೇಕು ಎಂದು ಪ್ರಕಾಶ್ ರಾಜ್ ಹೇಳಿದರು.
ಸಮೀಕ್ಷೆಗಳನ್ನು ನಂಬಬೇಡಿ, ಅವು ವ್ಯಾಪಾರವಾಗಿ ಮಾರ್ಪಟ್ಟಿವೆ ನಿಮ್ಮ ವಿವೇಚನೆಗೆ ತಕ್ಕಂತೆ ಮತ ಚಲಾಯಿಸಬೇಕು ಎಂದ ಅವರು ತಾನು ಆಡಳಿದಲ್ಲಿರುವವರನ್ನು ವಿರೋಧಿಸುತ್ತೇನೆ, ಅವರಿಗೆ ನಮ್ಮಿಂದ ಅಧಿಕಾರ ಸಿಕ್ಕಿದೆ ಅನ್ನೋದನ್ನು ಮರೆಯಬಾರದು ಎಂದರು. ತನಗೆ ಯಾವುದೇ ಪಕ್ಷ ಸೇರುವ ಇಚ್ಛೆಯಿಲ್ಲ, ಸಮಾಜ ಮತ್ತು ಮಾಧ್ಯಮ ತನ್ನನ್ನು ಗೌರವಿಸುತ್ತವೆ, ಅಷ್ಟು ಸಾಕು ಎಂದು ಪ್ರಕಾಶ್ ರಾಜ್ ಹೇಳಿದರು.