ಪ್ರತಿನಿಧಿ ವರದಿ ನಾಗಮಂಗಲ
ನಿರಂತರ ಓದು, ಶ್ರಮ ಮತ್ತು ಬದ್ಧತೆಗಳೇ ಯಶಸ್ಸಿನ ಕೀಲಿ ಕೈ ಎಂದು ಸ್ಪರ್ಧಾ ಲೈನ್ ಮುಖ್ಯಸ್ಥ ಡಾ.ರಘುನಾಥ ರೆಡ್ಡಿ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ನೂತನವಾಗಿ ಆರಂಭವಾದ ನಾಗಮಿತ್ರ ಅಕಾಡೆಮಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಯುವ ಜನತೆ ಓದಿನಿಂದ ವಿಮುಖರಾಗಿ ತಮ್ಮ ಸುಂದರ ಬದುಕನ್ನು ತಾವೇ ಸ್ವತಃ ಹಾಳು ಮಾಡಿಕೊಳ್ಳುತ್ತಿರುವುದು ದುರಂತ ಎಂದು ವಿಷಾದಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಅದ್ಭುತ ಮೆದುಳು ಕಾರ್ಯನಿರ್ವಹಿಸುತ್ತದೆ ಎಂದರು.
ಮಾದರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಹೆಚ್.ಟಿ.ಕೃಷ್ಣೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾಗಮಂಗಲದಂತಹ ಗ್ರಾಮೀಣ ಪ್ರದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವನ್ನು ತೆರೆಯುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಈ ಕಾರ್ಯ ಕೈಗೊಂಡಿರುವ ನಾಗಮಿತ್ರ ಅಕಾಡೆಮಿ ಅಭಿನಂದನಾರ್ಹ ಎಂದರಲ್ಲದೆ ಅಕಾಡೆಮಿಯ ಯಶಸ್ಸಿಗೆ ಸೂಕ್ತ ಸ್ಥಳಾವಕಾಶ ಒದಗಿಸುವ ಮೂಲಕ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ನಾ.ಸು.ನಾಗೇಶ್ ಮಾತನಾಡಿ, ನಾಗಮಂಗಲದ ಪ್ರತಿಭೆಗಳನ್ನು ಗುರುತಿಸಲು ಮತ್ತು ಅವಕಾಶ ಕಲ್ಪಿಸಲು ನಾಗಮಿತ್ರ ಅಕಾಡೆಮಿ ಪ್ರಾರಂಭಿಸಿರುವ ಸ್ಪರ್ಧಾತ್ಮಕ ಕೇಂದ್ರವನ್ನು ಉದ್ಯೋಗಾಂಕ್ಷಿಗಳು ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ಇತರರಿಗೆ ಪ್ರೇರಣೆಯಾಗಬೇಕೆಂದು ನುಡಿದರು.
ನಾಗಮಿತ್ರ ಅಕಾಡೆಮಿ ಸ್ಥಾಪನೆಯ ಪ್ರಮುಖ ರೂವಾರಿಗಳಾದ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಎಂ.ಮಲ್ಲೇಶ್ ಪ್ರಾಸ್ತಾವಿಕ ನುಡಿಗಳಾಡುತ್ತಾ ನಾಗಮಿತ್ರ ಅಕಾಡೆಮಿ ಬೆಂಗಳೂರಿನ ಸ್ಪರ್ಧಾ ಲೈನ್ ಸಹಯೋಗದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ತರಬೇತಿ ನೀಡುತ್ತಿದ್ದು ಅಕಾಡೆಮಿ ಮುಂದಿನ ದಿನಗಳಲ್ಲಿ ಮತ್ತಷ್ಟು ಪುರೋಗಾಮಿ ಕಾರ್ಯಕ್ರಮಗಳ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಹೊರತರಲು ನಿರಂತರವಾಗಿ ಶ್ರಮಿಸುವ ಮೂಲಕ ಮಣ್ಣಿನ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಸ್ಪರ್ಧಾ ಲೈನ್ ನ ಪ್ರಾಣೇಶ್ ರಾಥೋಡ್, ವಿಶ್ವನಾಥ ರೆಡ್ಡಿ, ನಾಗಮಿತ್ರ ಅಕಾಡೆಮಿ ಸಂಚಾಲಕ ಮುಳಕಟ್ಟೆ ಸುರೇಶ್, ಧನಂಜಯ, ಎಂ.ಡಿ. ಶಿವಕುಮಾರ್ ,ಮಧು, ನಟರಾಜ್, ಶಿವಕುಮಾರ್ ಎನ್.ಸಿ. , ಶಿವರಾಮ ಎನ್, ಯೋಗೇಶ್ ಎಂ.ಡಿ, ಸೀಮಂತಿನಿ ಮತ್ತಿತರರು ಹಾಜರಿದ್ದರು. ಪಟ್ಟಣದ ಎಸ್ ಎ ಸಿ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಎಂ.ಕೆ. ಗಾಯಿತ್ರಿ ನಿರೂಪಿಸಿ, ಸಿ.ಎಸ್. ರಾಧ ಸ್ವಾಗತಿಸಿದರು. ಮುಖ್ಯ ಅತಿಥಿಗಳು ಹಾಗೂ ಸ್ಥಳೀಯ ಹಾಗೂ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಿರುವ ಸಿ.ಕೆ.ಸುರೇಶ್ ರವರನ್ನು ಗೌರವಿಸಲಾಯಿತು.