ಹೊಸದಿಲ್ಲಿ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಗುಜರಾತ್, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಗೃಹ ಕಾರ್ಯದರ್ಶಿಗಳನ್ನು ವರ್ಗಾವಣೆ ಮಾಡುವಂತೆ ನಿರ್ದೇಶಿಸಿ ಆಯಾ ರಾಜ್ಯ ಸರಕಾರಿಗಳಿಗೆ ಆದೇಶ ನೀಡಿದೆ. ಮಿಜೋರಾಂ ಮತ್ತು ಹಿಮಾಚಲ ಪ್ರದೇಶದ ಆಡಳಿತ ಇಲಾಖೆಯ ಕಾರ್ಯದರ್ಶಿಯನ್ನೂ ಸಹ ಬದಲಿಸಲು ಚುನಾವಣಾ ಆಯೋಗ ಸೂಚಿಸಿದೆ.
ಇನ್ನು ಪಶ್ಚಿಮ ಬಂಗಾಳದ ಸಂದೇಶ್ ಖಾಲಿ ಪ್ರಕರಣದ ವೇಳೆ ಸಾಕಷ್ಟು ವಿವಾದ ಮೈಮೇಲೆ ಎಳೆದುಕೊಂಡಿದ್ದ ಪೊಲೀಸ್ ಮಹಾನಿರ್ದೇಶಕ ರಾಜೀವ್ ಕುಮಾರ್ ಅವರನ್ನು ಬದಲಿಸುವಂತೆ ಆದೇಶಿಸಿದೆ. ಈ ಆದೇಶದ ಬೆನ್ನಲ್ಲೇ ಪಶ್ಚಿಮ ಬಂಗಾಳ ಸರಕಾರವು 1988ನೇ ಸಾಲಿನ ಐಪಿಎಸ್ ಅಧಿಕಾರಿ ವಿವೇಕ್ ಸಹಾಯ್ ಅವರನ್ನು ಹೊಸ ಡಿಜಿಪಿಯಾಗಿ ನೇಮಿಸಿದೆ. ಈ ಮೊದಲು ಅವರು ರಾಜ್ಯ ಗೃಹ ರಕ್ಷಕ ದಳದ ಪ್ರಧಾನ ನಿರ್ದೇಶಕರಾಗಿದ್ದರು. ಇನ್ನು ರಾಜೀವ್ ಕುಮಾರ್ ಅವರನ್ನು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಗೆ ವರ್ಗಾವಣೆ ಮಾಡಿ, ಚುನಾವಣೇತರ ಕೆಲಸಗಳ ಜವಾಬ್ದಾರಿ ನೀಡಲಾಗಿದೆ. 2016ರ ವಿಧಾನಸಭೆ ಚುನಾವಣೆ ವೇಳೆ ಕೂಡ ಕೋಲ್ಕತಾ ಪೊಲೀಸ್ ಆಯುಕ್ತರಾಗಿದ್ದ ರಾಜೀವ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿತ್ತು.
ಈ ಆರು ರಾಜ್ಯಗಳ ಗೃಹ ಕಾರ್ಯದರ್ಶಿಗಳು ಮುಖ್ಯಮಂತ್ರಿ ಕಚೇರಿಯ ಹೆಚ್ಚುವರಿ ಉಸ್ತುವಾರಿ ಹೊಣೆಗಳನ್ನು ನೀಡಲಾಗಿತ್ತು. ಈ ಕಾರಣದಿಂದ ಅವರ ವರ್ಗಾವಣೆ ಮಾಡಲಾಗಿದೆ. ಇವರ ವಿರುದ್ಧ ಯಾವುದೇ ದೂರು ಇಲ್ಲದೆ ಇದ್ದರೂ, ಪಕ್ಷಪಾತ ನಡೆಗಳ ಆರೋಪ ಬಾರದಂತೆ ನೋಡಿಕೊಳ್ಳಲು ಬದಲಾವಣೆಗಳನ್ನು ಮಾಡಲಾಗಿದೆ.