ಕೆ.ಆರ್.ನಗರದ ಶ್ರೀರಾಮ ಬಡಾವಣೆಯಲ್ಲಿ ಆಚರಣೆ
ಪ್ರತಿನಿಧಿ ವರದಿ ಕೆ.ಆರ್.ನಗರ
ಪಟ್ಟಣದ ಶ್ರೀರಾಮ ಬಡಾವಣೆಯ ಭೋವಿ ಸಮುದಾಯದ ಗ್ರಾಮದೇವತೆ ಶ್ರೀ ಮಾರಮ್ಮ ತಾಯಿಯವರ 9ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಅದ್ದೂರಿಯಾಗಿ ಸೋಮವಾರ ನಡೆಯಿತು.
ಬ್ರಾಹ್ಮೀ ಮೂಹೂರ್ತದಲ್ಲಿ ದೇವರ ಉತ್ಸವ ಮೂರ್ತಿಯನ್ನು ಪಟ್ಟಣದ ಹೊರವಲಯದ ಹಳೇ ಎಡತೊರೆಯ ಕಾವೇರಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ ವಿವಿಧ ಒಡವೆ, ವಸ್ತ್ರ, ಹೂವುಗಳಿಂದ ಅಲಂಕರಿಸಲಾಯಿತು. ನಂತರ ನದಿಯ ದಡದಲ್ಲಿ ಪೂಜೆ ಪುರಸ್ಕಾರಗಳನ್ನು ನೆರವೇರಿಸಿ ಕಳಸಗಳನ್ನು ಹೊತ್ತ ಮುತ್ತೈದೆಯರು, ದೇವರ ಉತ್ಸವ ಮೂರ್ತಿಯನ್ನು ಹೊತ್ತು, ತಮಟೆ, ಛತ್ರಿ, ಛಾಮರ ಮತ್ತು ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ತರಲಾಯಿತು.
ಮೈಸೂರು-ಹಾಸನ ರಸ್ತೆಯ ಮಾರ್ಗವಾಗಿ ತಾಯಿಯ ಉತ್ಸವ ಮೂರ್ತಿಯನ್ನು ತಂದು ಶ್ರೀರಾಮ ಬಡಾವಣೆಯ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಆ ನಂತರ ಆಲಯ ಪ್ರವೇಶ ಮಾಡಿ ಮಾರಮ್ಮ ತಾಯಿಗೆ ಅಭಿಷೇಕ, ಪೂಜೆ, ಮಹಾಮಂಗಳಾರತಿ ನೆರವೇರಿಸಿ ಭಕ್ತಿಯಿಂದ ಪೂಜಿಸಲಾಯಿತು.
ಬಡಾವಣೆಯ ನಿವಾಸಿಗಳೆಲ್ಲಾ ದೇವಿಗೆ ಪೂಜೆ ಸಲ್ಲಿಸುವ ಮೂಲಕ ದರ್ಶನ ಪಡೆದರು. ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಮಜ್ಜಿಗೆ, ಪಾನಕ ಮತ್ತು ಪ್ರಸಾದ ವಿನಿಯೋಗ ಮಾಡಲಾಯಿತು.
ಕೆಪಿಸಿಸಿ ಕಾರ್ಯದರ್ಶಿ ದೊಡ್ಡಸ್ವಾಮೇಗೌಡ, ಕಾಂಗ್ರೆಸ್ ಮುಖಂಡ ಪುಟ್ಟರಾಜು ದೇವರ ದರ್ಶನ ಪಡೆದರು. ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭೋವಿ ಯುವಕರ ಸಂಘದ ತಾಲೂಕು ಅಧ್ಯಕ್ಷ ಶಿವು, ಪದಾಧಿಕಾರಿಗಳಾದ ಕೆ.ಎಸ್.ನಾಗೇಶ್, ಕುಮಾರ್, ದೇವರಾಜ್, ಏಸುರಾಜು, ರಾಜಶೇಖರ್, ಲಕ್ಷ್ಮೀನಾರಾಯಣ, ಮುಖಂಡರಾದ ಸತ್ಯಣ್ಣ, ಬಾಲಸುಬ್ರಮಣ್ಯ, ಸುಬ್ಬಣ್ಣ, ನಾಗರಾಜು, ಪುರುಷೋತ್ತಮ್, ಶ್ರೀನಿವಾಸ್, ಮಂಜುನಾಥ್ ಮತ್ತು ಮಹಿಳಾ ಸಂಘಟನೆ ಸದಸ್ಯರು ಮತ್ತು ಪಧಾಧಿಕಾರಿಗಳು ಹಾಜರಿದ್ದರು.
19 ಕೆಆರ್ಎನ್-1:- ಕೆ.ಆರ್.ನಗರದ ಶ್ರೀರಾಮ ಬಡಾವಣೆಯಲ್ಲಿ ಶ್ರೀ ಮಾರಮ್ಮ ತಾಯಿಯವರ 9ನೇ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು.