– ಪ್ರಣವಾನಂದ ಶ್ರೀಗಳ ವಿರುದ್ಧ ಈಡಿಗ ಸಮುದಾಯ ಕಿಡಿ
ಪ್ರತಿನಿಧಿ ವರದಿ ಮೈಸೂರು
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಗೀತಾ ಶಿವರಾಜ್ ಕುಮಾರ್ ಅವರನ್ನು ಬೆಂಬಲಿಸುವುದಿಲ್ಲ ಎಂಬುದು ಪ್ರಣವಾನಂದ ಸ್ವಾಮೀಜಿ ಅವರ ವೈಯಕ್ತಿಕ ಹೇಳಿಕೆಯಾಗಿದ್ದು, ಈಡಿಗ ಸಮುದಾಯದ್ದಲ್ಲ ಎಂದು ಜಿಲ್ಲಾ ಆರ್ಯ ಈಡಿಗ ಯುವ ವೇದಿಕೆ ಅಧ್ಯಕ್ಷ ಡಾ.ಎಸ್.ಟಿ.ರಾಜು ತಿಳಿಸಿದ್ದಾರೆ.
ರಾಜ್ಯದ ಮಾಜಿ ಸಿಎಂ ದಿವಂಗತ ಎಸ್.ಬಂಗಾರಪ್ಪ, ವರನಟ ಡಾ.ರಾಜಕುಮಾರ್ ಅವರನ್ನು ಸಮಾಜದ ಅಸ್ತಿತ್ವ ಎಂದು ಭಾವಿಸಿ ಈಡಿಗ ಸಮುದಾಯ ಮಂದುವರಿಯುತ್ತಿದೆ. ಆದರೆ ಪ್ರಣವಾನಂದ ಸ್ವಾಮೀಜಿ ಹೇಳಿಕೆಗಳು ಗೊಂದಲ ಸೃಷ್ಟಿಸುತ್ತಿವೆ. ಪ್ರಣವಾನಂದ ಸ್ವಾಮೀಜಿ ತಮ್ಮ ಕಾರ್ಯಕ್ರಮಗಳಲ್ಲಿ ಸ್ವಾರ್ಥ ಸಾಧನೆಗಾಗಿ, ಸ್ವಹಿತಾಸಕ್ತಿಗಾಗಿ ಮತ್ತು ಬಾಯಿಚಪಲಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಸಮುದಾಯದ ಮುಖಂಡರಲ್ಲಿ ಮತ್ತು ರಾಜಕೀಯ ನಾಯಕರಲ್ಲಿ ಮನಸ್ತಾಪ, ಒಡಕು ಉಂಟಾಗುತ್ತಿದೆ. ಹೀಗಾಗಿ ಅವರು ಈ ರೀತಿಯ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕೆಂದು ತಾಕೀತು ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಮಹದೇವ್, ನಾರಾಯಣ್, ಕೆ.ಎಸ್.ಮುರಳಿ, ಕೆ.ಪಿ.ಗುರುಮೂರ್ತಿ, ತಮ್ಮಣ್ಣೇಗೌಡ, ಎನ್.ಕೃಷ್ಣಮೂರ್ತಿ, ಎಸ್.ಎನ್.ನಾಗರಾಜ್ ಇದ್ದರು.
===================
ಎನ್ಇಪಿ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ಆರೋಪ
ಪ್ರತಿನಿಧಿ ವರದಿ ಮೈಸೂರು
ರಾಜ್ಯ ಸರ್ಕಾರ ಎನ್ಇಪಿ ಜಾರಿ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ನಡೆಸುತ್ತಿದೆ ಎಂದು ಕರ್ನಾಟಕ ಶಿಕ್ಷಣಕ್ಕಾಗಿ ಜನರ ವೇದಿಕೆ ಸಂಚಾಲಕ ಡಾ.ಈ.ಸಿ.ನಿಂಗರಾಜು ಸುದ್ದಿಗೋಷ್ಠಿಯಲ್ಲಿ ದೂರಿದರು.
ಸರ್ಕಾರಿ ಶಾಲೆಗಳು ಅಥವಾ ಸರ್ಕಾರಿ ಸ್ವಾಮ್ಯದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಬಲಿ ತೆಗೆದುಕೊಳ್ಳುವ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಳ್ಳುವ ಮೂಲಕ ಜನಾಗ್ರಹದ ವಿರುದ್ಧ ಸಾಗಿದೆ. ಕಳೆದ ವಿಧಾನಸಭಾ ಚುನಾವಣಾ ನಂತರ ರಾಜ್ಯದಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಇದ್ದ ಪಠ್ಯ ಪರಿಷ್ಕರಿಸಲು ಮುಂದಾಗಿರುವುದು ಸರಿಯಲ್ಲ. ರಾಜ್ಯದಲ್ಲಿ ಬಡಮಕ್ಕಳೇ ಹೆಚ್ಚಾಗಿರುವ ಸರ್ಕಾರಿ ಶಾಲೆಗಳತ್ತಲೇ ಸರ್ಕಾರ ರಾಜಕೀಯ ಹಸ್ತಕ್ಷೇಪ ನಡೆಸುತ್ತಿದೆ. ಪಠ್ಯ ಪರಿಷ್ಕರಣೆ ಮಾಡಿದರೆ ಸರ್ಕಾರಿ ಶಾಲೆಗಳಲ್ಲಿರುವ ಮೂಲ ಸೌಲಭ್ಯ ಕೊರತೆ, ಶಿಕ್ಷಕರ ತರಬೇತಿಗೆ ಹಣದ ಕೊರತೆ ಎದುರಾಗಲಿದೆ. ಒಳಗೊಳ್ಳುವಿಕೆಯ ಸೋಗಿನಲ್ಲಿ, ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ ಕಳಪೆ ಗುಣಮಟ್ಟದ ಸಾಹಿತ್ಯ ಪರಿಚಯಿಸಲಾಗುತ್ತಿದೆ. ಏಕಪಕ್ಷೀಯವಾಗಿ ಅಧ್ಯಾಯಗಳನ್ನು ತೆಗೆದುಹಾಕುವ ಸಿದ್ದರಾಮಯ್ಯ ಅವರ ಸರ್ವಾಧಿಕಾರಿ ಆದೇಶ ಸಾಂವಿಧಾನಿಕ ಮಾನದಂಡಗಳ ಉಲ್ಲಂಘನೆಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಚಾಲಕ ಪ್ರೊ.ಜಿ.ಸಿ.ರಾಜಣ್ಣ, ಎ.ಬಿ.ಜಯಣ್ಣ, ಡಾ.ಕೆ.ವಸಂತಕುಮಾರ್, ಪ್ರಜ್ವಲ್ ಹಾಜರಿದ್ದರು.
===============