– ಚಾಮುಂಡಿ ಬೆಟ್ಟ ಉಳಿಸಿ ಸಮಿತಿಯ ಆಗ್ರಹ
– ಕೇಂದ್ರ ಸರ್ಕಾರದ ಅನುಮೋದನೆಗೆ ಆಕ್ಷೇಪ
ಪ್ರತಿನಿಧಿ ವರದಿ ಮೈಸೂರು
ಚಾಮುಂಡಿಬೆಟ್ಟಕ್ಕೆ ರೋಪ್ ವೇ ನಿರ್ಮಾಣ ವಿಚಾರವಾಗಿ ಮತ್ತೆ ಚರ್ಚೆ ಶುರುವಾಗಿದ್ದು, ಬೆಟ್ಟಕ್ಕೆ ರೋಪ್ ವೇ ನಿರ್ಮಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದಕ್ಕೆ ಚಾಮುಂಡಿ ಬೆಟ್ಟ ಉಳಿಸಿ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
ಚಾಮುಂಡಿಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡುವ ವಿಷಯದ ಕುರಿತಂತೆ ಈಗಾಗಲೇ ಹಲವು ಬಾರಿ ಸಭೆಗಳನ್ನು ನಡೆಸುವ ಮೂಲಕ ಸದರಿ ಯೋಜನೆ ಕೈಬಿಡುವಂತೆ ಒತ್ತಾಯಿಸಲಾಗಿದೆ.
ಈ ಹಿಂದೆ 2023ರ ಜು.6ರಂದು ನಡೆದ ಸಭೆಯಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ರೋಪ್ ವೇ ಯೋಜನೆ ಕೈಬಿಡಲು ನಿರ್ಣಯ ಮಾಡಲಾಗಿದೆ. ಚಾಮುಂಡಿಬೆಟ್ಟವನ್ನು ಗಿಜಿಗುಡುವ ಪ್ರವಾಸಿ ತಾಣವಾಗಿ, ವ್ಯಾಪಾರಿ ಕೇಂದ್ರವನ್ನಾಗಿ ಮಾಡದೆ, ಭಕ್ತರ ಧಾರ್ಮಿಕ ಕೇಂದ್ರವಾಗಿ ಮಾತ್ರ ಉಳಿಸಿಕೊಳ್ಳಲು ಪ್ರಾಧಿಕಾರ ರಚಿಸುವ ಮೂಲಕ ಚಾಮುಂಡಿಬೆಟ್ಟಕ್ಕೆ ರೋಪ್ ವೇ ನಿರ್ಮಿಸುವ ಪ್ರಸ್ತಾವವನ್ನು ಸರ್ಕಾರ ಶಾಶ್ವತವಾಗಿ ಕೈಬಿಡಬೇಕೆಂದು ಸಮಿತಿ ಪರಶುರಾಮೇಗೌಡ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಈ ಪ್ರಾಧಿಕಾರದಲ್ಲಿ ಅರಣ್ಯ ಮತ್ತು ಪರಿಸರ ಖಾತೆಯ ಸಚಿವರು, ಭೂ ವಿಜ್ಞಾನಿ, ಪರಿಸರ ತಜ್ಞ, ಜಲ ತಜ್ಞ, ಪರಂಪರೆ ತಜ್ಞ, ಸಿವಿಲ್ ಇಂಜಿನಿಯರ್, ವನ್ಯಜೀವಿ ತಜ್ಞ ಇಂತವರು ಸದಸ್ಯರಾಗಿರಲಿ ಎಂದು ಸರ್ಕಾರಕ್ಕೆ ಮಾಡಿದ್ದ ನಮ್ಮ ಮನವಿಯನ್ನು ಕಡೆಗಣಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ನಮ್ಮ ಮನವಿ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ. ಅಲ್ಲದೇ ಕೇಂದ್ರ ಸರ್ಕಾರ ಪ್ರಸಾದ್ ಯೋಜನೆ ಬದಲಿಗೆ ಬೆಟ್ಟದಲ್ಲಿ ಗಿಡಗಳನ್ನು ಬೆಳೆಸುವುದು, ಮಳೆ ನೀರು ಕೊಯ್ಲು, ಚರಂಡಿ ನೀರಿನ ಸರಿಯಾದ ನಿರ್ವಹಣೆ ಮತ್ತು ಜಲಮೂಲಗಳ ಸಂರಕ್ಷಣೆ ಸೇರಿದಂತೆ ಇನ್ನಿತರ ಪರಿಸರ ಸ್ನೇಹಿ ಸುಸ್ಥಿರ ಅಭಿವೃದ್ಧಿಗೆ ಮುಂದಾಗಬೇಕಿದೆ . ಅಭಿವೃದ್ಧಿ ಹೆಸರಿನಲ್ಲಿ ಕಾಮಗಾರಿ ಕೈಗೊಂಡರೆ ಬೆಟ್ಟ ಕುಸಿಯುತ್ತದೆ. ಈಗಾಗಲೇ ಕುಸಿದಿರುವ ರಸ್ತೆ ಸರಿಪಡಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ರೋಪ್ ನಿರ್ಮಿಸುವುದರಿಂದ ಬೆಟ್ಟ ಮೋಜಿ ಮಸ್ತಿಯ ತಾಣವಾಗುವುದಲ್ಲದೆ ಮತ್ತೆ ಕುಸಿಯುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ರೋಪ್ವೇ ನಿರ್ಮಿಸಬಾರದು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಹಿತಿ ಹೊರೆಯಾಲ ದೊರೆಸ್ವಾಮಿ, ಪ್ರೊ. ರಂಗರಾಜು, ಸಮಿತಿ ಸದಸ್ಯರಾದ ಸುಮಲತಾ, ಲೀಲಾ ಶಿವಕುಮಾರ್, ಪೂರ್ಣಿಮಾ ಕೋಟಾ ಹಾಜರಿದ್ದರು.
================