ಬೆಂಗಳೂರು : ಲೋಕಸಭೆ ಚುನಾವಣೆ ಚುನಾವಣೆ ಘೋಷಣೆ ಆಗಿದ್ದೇ ಆಗಿದ್ದು, ರಾಜ್ಯದಲ್ಲಿ ಅಕ್ರಮ ಹಣ ಸಾಗಾಟ ಹೆಚ್ಚಾಗಿದೆ. ಅಕ್ರಮ ಹಣ ಸಾಗಾಟ ಪತ್ತೆಗೆ ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನೂ ನಡೆಸುತ್ತಿದ್ದಾರೆ. ಅದರಲ್ಲೂ ಮಂಗಳವಾರ ಒಂದೇ ದಿನ ಬರೋಬ್ಬರಿ 3 ಕೋಟಿ ರೂ. ಹಣ ಸೀಜ್ ಮಾಡಿದ್ದಾರೆ. ಹಲವೆಡೆ, ಕಂತೆ ಕಂತೆ ನಗದು ಪತ್ತೆಯಾಗಿದ್ದರೆ, ರಾಮನಗರದಲ್ಲಿ ಗರಿ ಗರಿ ನೋಟಿನ ಜೊತೆ ರಾಶಿರಾಶಿ ಸೀರೆಗಳು ಸಿಕ್ಕಿವೆ. ರಾಮನಗರದ ದ್ಯಾವರಸೇಗೌಡನದೊಡ್ಡಿಯಲ್ಲಿರುವ ಖಾಸಗಿ ಗೋದಾಮಿನಲ್ಲಿ ರಾಶಿರಾಶಿ ಸೀರೆಗಳು ಪತ್ತೆಯಾಗಿವೆ. ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಸೀರೆಗಳು ಪತ್ತೆಯಾಗಿದ್ದು, ಮತದಾರರಿಗೆ ಹಂಚಲು ಸೀರೆಗಳನ್ನು ಸಂಗ್ರಹಿಸಿದ್ದ ಆರೋಪ ಕೇಳಿ ಬಂದಿದೆ. ಸ್ಥಳಕ್ಕೆ ಡಿವೈಎಸ್ಪಿ ದಿನಕರ್ ಶೆಟ್ಟಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.