ಪ್ರತಿನಿಧಿ ವರದಿ ಹುಣಸೂರು
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ಆಡಳಿತದ ಸಹಯೋಗದಲ್ಲಿ ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ವಿಶ್ವ ಗ್ರಾಹಕರ ದಿನವನ್ನು ಆಚರಿಸಲಾಯಿತು.
ಬುಧವಾರ ಕಾಲೇಜಿನ ಅರಸು ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಎ.ಕೆ.ನವೀನ ಕುಮಾರಿ ಮಾತನಾಡಿ, ಗ್ರಾಹಕರಿಗೆ ಮೋಸವಾಗದಂತೆ ವ್ಯಾಪಾರಿಗಳು ಎಚ್ಚರವಹಿಸುವುದು ಮುಖ್ಯ. ಅಂತೆಯೇ ಗ್ರಾಹಕರೂ ಆಹಾರ ಕಲಬೆರಕೆ, ತೂಕದಲ್ಲಿನ ನ್ಯೂನತೆಗಳ ಕುರಿತು ಅರಿವು ಮೂಡಿಸಿಕೊಳ್ಳಬೇಕು. ಆಗ ಮಾತ್ರ ಗ್ರಾಹಕ ಮತ್ತು ವ್ಯಾಪಾರಿಯ ನಡುವಿನ ವ್ಯಾಜ್ಯಗಳು ನಿಯಂತ್ರಣಕ್ಕೆ ಬರಲು ಸಾಧ್ಯ. ಕಲಬೆರಕೆ ಎನ್ನುವುದು ಇಂದು ಸಾಮಾನ್ಯ ಸಂಗತಿ ಎನ್ನುವಂತಾಗಿದೆ. ಆಹಾರದ ಕಲಬೆರಕೆಯ ಮೂಲಕ ಭವಿಷ್ಯದ ಜನಾಂಗಕ್ಕೆ ನಾವು ವಿಷವುಣಿಸುತ್ತಿದ್ದೇವೆ ಎನ್ನುವ ಅರಿವು ನಮಗಿರಲಿ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಜಿ.ದಿನೇಶ್ ಮಾತನಾಡಿ, ಕಾನೂನು ಸೇವೆಗಳ ಪ್ರಾಧಿಕಾರ ಗ್ರಾಹಕರಿಗೆ ಉಚಿತವಾಗಿ ಕಾನೂನು ಸೇವೆ ನೀಡುತ್ತಿದೆ. ಆರ್ಥಿಕವಾಗಿ ದುರ್ಬಲರಿಗೆ ಅನ್ಯಾಯವಾದಾಗ ಪ್ರಾಧಿಕಾರ ಉಚಿತವಾಗಿ ಸೇವೆ ನೀಡುವುದಲ್ಲದೆ, ಗ್ರಾಹಕರಿಗೆ ಆಗಬಹುದಾದ ಅನ್ಯಾಯಗಳ ಕುರಿತು ಅರಿವು ಮೂಡಿಸುವ ಕಾರ್ಯವನ್ನೂ ನಡಸಿದೆ ಎಂದರು.
ಪ್ರಾಂಶುಪಾಲೆ ಪ್ರೊ.ಆರ್.ಕವಿತಾ, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಪ್ರತೀಕ್ ಹೆಗಡೆ, ಗ್ರೇಡ್-೨ ತಹಸಿಲ್ದಾರ್ ನರಸಿಂಹಯ್ಯ ಹಾಗೂ ಆಹಾರ ಇಲಾಖೆಯ ಸಿಬ್ಬಂದಿ ಹಾಜರಿದ್ದರು.
೨೦ಊUಓ೩: ಹುಣಸೂರು ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಎ.ಕೆ.ನವೀನಕುಮಾರಿ, ನ್ಯಾಯಾಧೀಶ ಬಿ.ಜಿ.ದಿನೇಶ್, ಪ್ರಾಂಶುಪಾಲೆ.ಡಾ.ಕವಿತಾ ಇತರರಿದ್ದಾರೆ.