- ಎಚ್.ಡಿ.ಕೋಟೆಯಲ್ಲಿ ವಿಶ್ವ ಬಾಯಿ ಆರೋಗ್ಯ ದಿನಾಚರಣೆ
ಪ್ರತಿನಿಧಿ ವರದಿ ಎಚ್.ಡಿ.ಕೋಟೆ
ನಮ್ಮ ಬಾಯಿ ನಮ್ಮ ದೈಹಿಕ ಆರೋಗ್ಯಕ್ಕೆ ಕನ್ನಡಿ ಇದ್ದ ಹಾಗೆ. ಏಕೆಂದರೆ, ಅನೇಕ ಕಾಯಿಲೆಗಳ ರೋಗಲಕ್ಷಣಗಳು ಮೊದಲಿಗೆ ಬಾಯಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ದಂತತಜ್ಞ ಡಾ.ಸಮೀವುಲ್ಲಾ ಶರೀಫ್ ಹೇಳಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಮತ್ತು ಸಾರ್ವಜನಿಕ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ವಿಶ್ವ ಬಾಯಿ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಬ್ಬ ವ್ಯಕ್ತಿಯ ಬಾಯಿಯನ್ನು ಪರೀಕ್ಷಿಸಿ ಅವನು ಎಷ್ಟು ಆರೋಗ್ಯಕರವಾಗಿದ್ದಾನೆಂದು ಗುರುತಿಸಬಹುದು. ನಾವು ಸೇವಿಸುವ ಆಹಾರ ಎಷ್ಟೇ ಶುಚಿಯಾಗಿದ್ದು, ಎಷ್ಟೇ ಪೌಷ್ಟಿಕಾಂಶದಿಂದ ಕೂಡಿದ್ದರೂ ನಮ್ಮ ಬಾಯಿ ಆರೋಗ್ಯಕರವಾಗಿಲ್ಲದಿದ್ದರೆ, ಬಾಯಿಯಲ್ಲಿನ ಕ್ರಿಮಿ ಕೀಟಗಳೊಂದಿಗೆ ಆಹಾರ ನಮ್ಮ ದೇಹಕ್ಕೆ ಸೇರಿ ನಮಗೆ ಅನೇಕ ಕಾಯಿಲೆಗಳು ಬರುವ ಸಂಭವವಿರುತ್ತದೆ. ಪ್ರತಿನಿತ್ಯ ಎರಡು ಬಾರಿ ಹಲ್ಲನ್ನು ಸ್ವಚ್ಛಗೊಳಿಸಬೇಕು. ಬಿಡಿ, ಸಿಗರೇಟ್, ತಂಬಾಕು, ಸೇವನೆಯಿಂದ ದೂರವಿರಬೇಕು, ಇದರಿಂದ ಬಾಯಿ ಕ್ಯಾನ್ಸರ್ ಬರುವ ಸಂಭವ ಬಹಳ ಹೆಚ್ಚು. ದುಶ್ಚಟಗಳಿಂದ ದೂರವಿದ್ದು ಬಾಯಿ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಮಾ.20ರಂದು ವಿಶ್ವದಲ್ಲೆಡೆ ವಿಶ್ವಬಾಯಿ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಜನರಿಗೆ ಬಾಯಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಬಾಯಿ ಆರೋಗ್ಯದ ಮಹತ್ವವನ್ನು ತಿಳಿಸಿಕೊಡುವುದು ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಮಾತನಾಡಿ, ನಮ್ಮ ತಾಲ್ಲೂಕಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವ ಬಾಯಿ ಆರೋಗ್ಯ ದಿನವನ್ನು ಕಾರ್ಯಕ್ರಮವನ್ನು ಆಚರಿಸುತಿದ್ದೇವೆ. ಎಲ್ಲರೂ ದಿನನಿತ್ಯ ದೇಹವನ್ನು ಸ್ವಚ್ಛಗೊಳಿಸುವ ಹಾಗೆ ದಂತವನ್ನು ಸ್ವಚ್ಛಗೊಳಿಸಬೇಕು. ದಿನಕ್ಕೆರಡು ಬಾರಿ ದಂತವನ್ನು ಸ್ವಚ್ಛಗೊಳಿಸಿ ಎಂದು ತಿಳಿಸಿದರು.
ತಾಲ್ಲೂಕು ನೋಡಲ್ ಅಧಿಕಾರಿ ಮತ್ತು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಹದೇವ್ ಪ್ರಸಾದ್, ಸಾರ್ವಜನಿಕ ಆಸ್ಪತ್ರೆ ಯ ಆಡಳಿತ ವೈದ್ಯಾಧಿಕಾರಿ ಡಾ.ಸೋಮಣ್ಣ, ಕಿವಿ ಮತ್ತು ಮೂಗಿನ ತಜ್ಞ ಡಾ.ದಿನಕರ್, ಸಾರ್ವಜನಿಕ ಆಸ್ಪತ್ರೆಯ ಶುಶ್ರೂಷಕ ಮೇಲ್ವಿಚಾರಕರಾದ ಪರಿಮಳ, ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಸರಳ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ.ರವಿರಾಜ್, ಆಸ್ಪತ್ರೆ ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಇತರರಿ ಇದ್ದರು.