ಪಾಂಡವಪುರ : ವಿಶ್ವೇಶ್ವರಯ್ಯ ನಾಲೆ ಕಾಮಗಾರಿಯನ್ನು ವಿವಿಧ ಸ್ಥಳಗಳಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದ ರೈತಸಂಘ ನಿಯೋಗ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಕೆಆರ್ ಎಸ್ ಜಲಾಶಯದಿಂದ ಹುಲಿಕೆರೆ ಟನಲ್ ತನಕ ವಿಶ್ವೇಶ್ವರಯ್ಯ ನಾಲೆ ಕಾಮಗಾರಿ ನಡೆಯುತ್ತಿದ್ದು, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ನಾರ್ತ್ ಬ್ಯಾಂಕ್ ಗ್ರಾಮ ಸಮೀಪದ ಕಾಮಗಾರಿ ಪರಿಶೀಲಿಸಿದರು.
ನಾಲೆ ಕಾಮಗಾರಿ ವೀಕ್ಷಿಸಿದ ಶಾಸಕರು, ಸಂಬಂಧಪಟ್ಟ ಗುತ್ತಿಗೆದಾರ ಹಾಗೂ ಅಧಿಕಾರಿಗೆ ಸ್ಥಳದಲ್ಲೇ ಸೂಚಿಸಿ, ಮೇ ತಿಂಗಳ ಅಂತ್ಯದೊಳಗೆ ನಾಲೆ ಕಾಮಗಾರಿ ಸಂಪೂರ್ಣಗೊಳಿಸಿ, ನಾಲೆಯಲ್ಲಿ ನೀರು ಹರಿಸಬೇಕು ಎಂದು ಸೂಚಿಸಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಈ ಹಿಂದಿನ ಅವಧಿಯಲ್ಲೇ ಮೀಸಲಾಗಿದ್ದ ವಿಸಿ ನಾಲೆ ಆಧುನೀಕರಣ ಕಾಮಗಾರಿ 330 ಕೋಟಿರೂ ಅನುದಾನದಲ್ಲಿ ಪ್ರಸ್ತುತವಾಗಿ ಕಾಮಗಾರಿ ನಡೆಯುತ್ತಿದೆ. ಕೆಆರ್ ಎಸ್ ಜಲಾಶಯದಿಂದ ಹುಲಿಕೆರೆ ಭುಗದ ತನಕ 46 ಕಿ.ಮೀ ದೂರದಷ್ಟು ನಡೆಯುವ ಕಾಮಗಾರಿಯಲ್ಲಿ ಈಗ 7 ಕಿ.ಮೀ ದೂರದಷ್ಟು ಕೆಲಸ ಆಗಿದೆ.
ಪ್ರತಿದಿನ ಅರ್ಧ ಕಿ.ಮೀ.ದೂರ ಕೆಲಸ ಆಗುತ್ತಿದೆ. ಇನ್ನು ವೇಗವಾಗಿ ಪ್ರತಿದಿನ ಒಂದು ಕಿ.ಮೀ ದೂರ ಕೆಲಸ ನಡೆದರೆ ಬೇಗ ಸಂಪೂರ್ಣವಾಗುತ್ತದೆ. ಮಳೆ ಬಂದರೆ ಕೆಲಸ ಮಾಡಲು ತೊಂದರೆ ಉಂಟಾಗುತ್ತದೆ. ಸಾಧ್ಯವಾದಷ್ಟೂ ಬೇಗ ಕೆಲಸ ಮುಗಿಸಿದರೆ ನಾಲೆಗೆ ನೀರು ಹರಿಸಬಹುದು ಎಂದರು.
ರೈತಸಂಘದ ನಿಯೋಗದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಪಾಂಡವಪುರ ತಾಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಎಣ್ಣೆಹೊಳೆಕೊಪ್ಪಲು ಮಂಜು ಮುಖಂಡರಿದ್ದರು.