ಪ್ರತಿನಿಧಿ ವರದಿ ಗುಂಡ್ಲುಪೇಟೆ
ತಾಲೂಕಿನ ಹೊಂಗಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಗುಬ್ಬಚ್ಚಿ ದಿನಾಚರಣೆ ಆಚರಿಸಲಾಯಿತು.
ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಅವರು ಗುಬ್ಬಿ ಕೊಳಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ತಾವು ಸೆರೆಹಿಡಿದ ಹಕ್ಕಿಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಮಕ್ಕಳಿಗೆ ಗುಬ್ಬಿಯ ವಿಶೇಷತೆಗಳನ್ನು ವಿವರಿಸಿದರು. ಭಾರತದಲ್ಲಿ ೧೦ಬಗೆಯ ಗುಬ್ಬಿಗಳಿದ್ದು ಮನೆಗುಬ್ಬಿ, ರಾಕ್ ಗುಬ್ಬಿ, ಮರಗುಬ್ಬಿ, ರಸೆಟ್ ಗುಬ್ಬಿ, ಸಿಂಧ್ ಗುಬ್ಬಿ, ಸೊಮಾಲಿ ಗುಬ್ಬಿ, ಕಪ್ಪು ಕತ್ತಿನ ಗುಬ್ಬಿ, ಕೇಪ್ ಗುಬ್ಬಿ, ಶೆಲಿ ಗುಬ್ಬಿ, ಸಹೇಲ್ ಗುಬ್ಬಿ ಪ್ರಬೇಧಗಳಿವೆ ಎಂದರು.
ಗುಬ್ಬಚ್ಚಿಯ ವಾಸಸ್ಥಳದ ಏರುಪೇರಿನಿಂದ ಅವು ದಯನೀಯ ಸ್ಥಿತಿಯಲ್ಲಿವೆ. ಅಲ್ಲದೇ ಅತಿಯಾದ ಕ್ರಿಮಿನಾಶಕದಿಂದ ಅವುಗಲ ಸಂತತಿ ವಿನಾಶದಂಚಿನಲ್ಲಿವೆ ಎಂದರು. ಸಲೀಂ ಅಲಿ ಅವರು ಗುಬ್ಬಿಯಿಂದಾಗಿ ಪಕ್ಷಿತಜ್ಞರಾದ ರೋಚಕೆ ಕಥೆ ವಿವರಿಸಿ ಚೀನಾದೇಶದ ಗುಬ್ಬಿಯ ವಿನಾಶದ ಕಥೆ ವಿವರಿಸಿದರು.
ಶಾಲೆಯ ಮುಖ್ಯೋಪಾಧ್ಯಯ ಮಹದೇಶ್ವರಸ್ವಾಮಿ ಮಾತನಾಡಿ, ಪಕ್ಷಿಗಳು ನೀರಿಲ್ಲದೇ ಸಾಯುವುದ ತಿಳಿಸಿ ಅವುಗಳಿಗೆ ಮನೆಯಲ್ಲಿ ನಿತ್ಯ ನೀರಿಡಲು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿ ಮಕ್ಕಳು ಹಾಜರಿದ್ದರು.