ಪ್ರತಿನಿಧಿ ವರದಿ ಚಾಮರಾಜನಗರ
ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತೆರೆದಿರುವ ವಿವಿಧ ಚೆಕ್ಪೋಸ್ಟ್ಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾನಾಗ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ನಿರ್ವಹಣೆ ಕುರಿತು ಚಾ.ನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಹಾಯಕ ಚುನವಣಾಧಿಕಾರಿಗಳು, ನಿಯೋಜಿತ ನೋಡೆಲ್ ಅಧಿಕಾರಿಗಳೊಂದಿಗೆ ನಡೆದ ವರ್ಚುವೆಲ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಚ್.ಡಿ.ಕೋಟೆ, ನಂಜನಗೂಡು, ವರುಣಾ, ತಿ.ನರಸೀಪುರ, ಹನೂರು, ಕೊಳ್ಳೇಗಾಲ, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂತಾರಾಜ್ಯ ಹಾಗೂ ಅಂತರ್ ಜಿಲ್ಲಾ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ಕಾರ್ಯ ಚುರುಕುಗೊಳಿಸಬೇಕು. ದಾಖಲೆ ಇಲ್ಲದೇ ಸಾಗಿಸುವ ಹಣ, ಅಕ್ರಮ ಮದ್ಯ ಸಾಗಣೆ, ಆಮಿಷ ಒಡ್ಡುವ ವಸ್ತುಗಳ ಮೇಲೆ ಹೆಚ್ಚಿನ ನಿಗಾ ಇರಬೇಕು. ಎಲ್ಲ ವಾಹನಗಳನ್ನು ವ್ಯಾಪಕವಾಗಿ ತಪಾಸಣೆ ಮಾಡಬೇಕು ಎಂದರು.
ಚೆಕ್ಪೋಸ್ಟ್ಗಳಲ್ಲಿ ಅಗತ್ಯ ಮೂಲ ಸೌಕರ್ಯಗಳ ವ್ಯವಸ್ಥೆ ಇರಬೇಕು. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಅವಶ್ಯವಾಗಿರುವ ಜರ್ಕಿನ್, ಟಾರ್ಚ್ಗಳು ಇರಬೇಕು. ಎಲ್ಲ ಚೆಕ್ಪೋಸ್ಟ್ಗಳಲ್ಲಿ ಸಿಸಿ ಟಿ.ವಿ ಕಾರ್ಯ ನಿರ್ವಹಿಸಬೇಕು. ವಿದ್ಯುತ್ ಅಡಚಣೆಯಾಗದಿರಲು ಯು.ಪಿ.ಎಸ್. ವ್ಯವಸ್ಥೆಯನ್ನೂ ಮಾಡಬೇಕು ಎಂದರು.
ಚೆಕ್ಪೋಸ್ಟ್ಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಿಬ್ಬಂದಿ ವಾಹನಗಳನ್ನು ಕೂಲಂಕುಷವಾಗಿ ತಪಾಸಣೆ ಮಾಡಬೇಕು. ಈ ಬಗ್ಗೆ ರಿಜಿಸ್ಟ್ರ್ಗಳಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಚುನಾವಣಾ ಕೆಲಸಗಳಿಗಾಗಿ ನಿಯೋಜಿತರಾಗಿರುವ ಎ.ಆರ್.ಒ ಮತ್ತು ತಹಸೀಲ್ದಾರರು ಭೇಟಿ ನೀಡಿ ಚೆಕ್ ಪೋಸ್ಟ್ ಕಾರ್ಯ ನಿರ್ವಹಣೆ ಪರಿಶೀಲಿಸಬೇಕು ಎಂದರು.
ಮಾದರಿ ನೀತಿ ಸಂಹಿತೆ ಪಾಲನೆಗೆ ನಿಗಾ ವಹಿಸಲು ನಿಯೋಜಿತರಾಗಿರುವ ಫೈಯಿಂಗ್ ಸ್ಕ್ವಾಡ್ ತಂಡ, ವಿಡಿಯೋ ಸರ್ವೇಲೆನ್ಸ್ ಘಟಕ, ವಿಡಿಯೋ ವೀವಿಂಗ್ ತಂಡಗಳು ಹೆಚ್ಚು ಚಟುವಟಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.
ಎಡಿಸಿ ಗೀತಾ ಹುಡೇದ, ಜಿಲ್ಲಾಮಟ್ಟದ ಅಧಿಕಾರಿಗಳು, ಇತರರು ಸಭೆಯಲ್ಲಿ ಇದ್ದರು.