ಪ್ರತಿನಿಧಿ ವರದಿ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಕ್ಕೆ ಅವರೇ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿರುವುದಾಗಿ ಯಲಹಂಕದ ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.
ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿವಾಹಿನಿಯೊಂದಿಗೆ ಮಾತನಾಡಿ, ಕ್ಷೇತ್ರದ ಅಭ್ಯರ್ಥಿಯ ಘೋಷಣೆಯು ಮಾ.೨೨ಕ್ಕೆ ಆಗಲಿದ್ದು, ಈಗಾಗಲೇ ಕ್ಷೇತ್ರದ ಮುಖಂಡರು ಅಲೋಕ್ ಒಲವು ತೋರಿದ್ದಾರೆ. ಅಲ್ಲದೆ ಸರ್ವೇ ಕಾರ್ಯದಲ್ಲಿ ಅಲೋಕ್ರ ಹೆಸರು ಮುಂಚೂಣಿಯಲ್ಲಿದೆ. ಆದರೂ ಡಾ.ಕೆ.ಸುಧಾಕರ್ರ ತ್ಯಾಗ ಹಾಗೂ ಸೇವೆಯನ್ನು ಪರಿಗಣಿಸಿ ನಾನು ಅವರಿಗೇ ಟಿಕೆಟ್ ನೀಡಲು ಸಮ್ಮತಿ ನೀಡಿರುವುದಾಗಿ ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಇದರಿಂದ ನನ್ನ ಪೋನ್ಗೆ ಹಲವು ಕರೆಗಳು ಬರುತ್ತಿದ್ದು, ಇದಕ್ಕೆ ಉತ್ತರಿಸಲು ಸಾಧ್ಯವಾಗದೆ ಫೋನ್ ಸ್ವಿಚ್ಆಫ್ ಮಾಡಿರುವೆ. ಚುನಾವಣೆ ತಂತ್ರಗಾರಿಕೆಯಲ್ಲಿ ನಾನು ಸುಧಾಕರ್ ಅವರಿಗಿಂತಲೂ ನಿಪುಣರಾಗಿದ್ದು, ಅವರು ರಾಜ್ಯ ರಾಜಕಾರಣಲ್ಲಿಯೇ ಮುಂದುವರೆಯಲಿ, ನಾನು ರಾಷ್ಟ್ರ ರಾಜಕಾರಣಕ್ಕೆ ಪದಾರ್ಪಣೆ ಮಾಡುವುದಾಗಿ ತಮ್ಮ ಅಸಮಧಾನ ಹೊರಹಾಕಿದರು.
ದೆಹಲಿಯಲ್ಲಿ ನಡೆದ ಅಭ್ಯರ್ಥಿಗಳ ಆಯ್ಕೆಯ ಕುರಿತು ನಡೆದ ಸಭೆ ಏನಾಗಿದೆ ಗೊತ್ತಿಲ್ಲ. ಆದರೆ ಅಭ್ಯರ್ಥಿಯ ಆಯ್ಕೆ ಕುರಿತು ಸುದೀರ್ಘ ಚರ್ಚೆ ಆಗಿದೆ. ಸಬೆಯಲ್ಲಿ ಅಲೋಕ್ರ ಬಗ್ಗೆ ತಪ್ಪು ಹುಡುಕಲು ಆಗಲಿಲ್ಲ. ಅಲ್ಲದೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಆದರೆ ಅಲೋಕ್ ಸ್ಪರ್ಧಿಸಿದರೆ ಗೆಲ್ಲುವುದಾಗಿ ಚರ್ಚೆ ಆಗಿದೆ. ಈ ಕುರಿತು ಮಾ.೨೨ ರಂದು ತೀರ್ಮಾನ ಆಗಲಿದೆ. ಆದರೂ ತಪ್ಪು ಮಾಹಿತಿ ರವಾನಿಸಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಸುಧಾಕರ್ ಅವರು ಸ್ಪರ್ಧಿಸಿದರೆ ಗೆಲುವು ಕಷ್ಟಕರವಾಗಲಿದೆ. ಲೋಕಸಭೆ ಒಂದು ಕ್ಷೇತ್ರವು ಪ್ರಮುಖ ಪಾತ್ರವಹಿಸಲಿದೆ. ಇದರ ಪರಿಣಾಮವನ್ನು ಅನುಭವಿಸಿರುವೆ. ಅಲ್ಲದೆ ಒಂದು ಲೋಕಸಭಾ ಕ್ಷೇತ್ರ ಗೆವನ್ನು ಸಾಧಿಸಿದಲ್ಲಿ ೪-೫ ವಿಧಾನಸಭಾ ಕ್ಷೇತ್ರಗಳ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ದೂರದೃಷ್ಟಿ ಹೊಂದಿರುವೆ. ಆದರೂ ಟಿಕೆಟ್ ಅವರಿಗೆ ನೀಡಿದಲ್ಲಿ ಫಲಿತಾಂಶದಲ್ಲಿ ವ್ಯತ್ಯಾಸ ಆಗಲಿದೆ ಎಂದರು.
ಯಲಹಂಕ ಕ್ಷೇತ್ರದ ಮತದಾನವೂ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಲಿದೆ. ನಾನು ಟಿಕೆಟ್ ಯಾರಿಗೆ ನೀಡಿದರೂ ಮೋದಿಯವರನ್ನು ಪ್ರಧಾನಿಯನ್ನಾಗಿಸಲು ಶ್ರಮಿಸುವೆ. ಆದರೆ ಕ್ಷೇತ್ರದ ಮತದಾರರು ಅಭ್ಯರ್ಥಿಯ ವರ್ಚಸ್ಸನ್ನು ಪರಿಗಣಿಸುವರು. ಅಲ್ಲದೆ ಕಾರ್ಯಕರ್ತರು ಅಭ್ಯರ್ಥಿ ಯಾರೆಂಬುದನ್ನು ಪರಿಗಣಿಸುವರು. ಇದರಲ್ಲಿ ಏರುಪೇರಾದರೂ ಡಾ.ಕೆ.ಸುಧಾಕರ್ ಹಾಗೂ ಪಕ್ಷಕ್ಕೆ ತೊಂದರೆ ಆಗಲಿದೆ ಎಂದು ಎಚ್ಚರಿಸಿದರು.
ಈ ನಿಟ್ಟಿನಲ್ಲಿ ನಾನೇ ಅಭ್ಯರ್ಥಿಯಾಗಲು ತೀರ್ಮಾನಿಸಿದ್ದು, ಪಕ್ಷದ ಎಲ್ಲ ಸ್ಥರಗಳಲ್ಲಿಯೂ ಕಾರ್ಯನಿರ್ವಹಿಸಿರುವೆ. ಅಲ್ಲದೆ ನನ್ನ ಪರಿಚಯ ಕ್ಷೇತ್ರದ ಪ್ರತಿಯೊಬ್ಬ ಮುಖಂಡನಿಗೂ ಇದ್ದು, ನಾನು ಸ್ಪರ್ಧಿಸಿದಲ್ಲಿ ಸುಧಾಕರ್ ಅವರೂ ಬೇಡ ಎನ್ನುವುದಿಲ್ಲ. ಆದ್ದರಿಂದ ತಾವು ರಾಷ್ಟ್ರ ರಾಜಕಾರಣ ಮಾಡಲು ಮುಂದಾಗುವುದಾಗಿ ತಿಳಿಸಿದರು.