ಮೈಸೂರು: ಇದು ಸಾಮಾನ್ಯ ವ್ಯಕ್ತಿ ವರ್ಸಸ್ ರಾಜರ ನಡುವಿನ ಚುನಾವಣೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ವ್ಯಾಖ್ಯಾನಿಸಿದ್ದಾರೆ. ನನ್ನ ಮತ್ತು ವಿಜಯ್ ಕುಮಾರ್ ಹೆಸರು ಹೈಕಮಾಂಡ್ಗೆ ತಲುಪಿತ್ತು. ಇಬ್ಬರಲ್ಲಿ ನನಗೆ ಅವಕಾಶ ಸಿಕ್ಕಿದೆ. ನಾನು ಒಬ್ಬ ಬಡ ರೈತ ಕುಟುಂಬದಿಂದ ಬಂದವನು. ನನಗೆ ಯಾವುದೇ ರಾಜಕೀಯ ಹಿನ್ನಲೆ ಇಲ್ಲ. ಕೆಪಿಸಿಸಿ ವಕ್ತಾರನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲು ನನ್ನದು ಅಳಿಲು ಸೇವೆಯಿದೆ. ಮೈಸೂರು ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಒಕ್ಕಲಿಗ ಸಮುದಾಯದ ಮತ ಹೆಚ್ಚಿವೆ. ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋರಾಟ ಮಾಡಿದ್ದೇನೆ. ಕಳೆದ ಹತ್ತು ವರ್ಷದಿಂದ ಬಿಜೆಪಿಯಿಂದ ಒಕ್ಕಲಿಗ ಅಭ್ಯರ್ಥಿ ಆಯ್ಕೆಯಾಗಿದ್ರು. ಈ ಬಾರಿ ಪ್ರತಾಪ್ ಸಿಂಹರೇ ಅಭ್ಯರ್ಥಿಯಾಗ್ತೀನಿ ಅನ್ನುವ ವಿಶ್ವಾಸ ಅವರಿಗೂ ಇತ್ತು. ಪ್ರತಾಪ್ ಸಿಂಹಗೆ ಯಾಕೆ ಟಿಕೆಟ್ ತಪ್ಪಿತು ಅಂತ ಅವರದರೂ ಹೇಳಬೇಕು, ಇಲ್ಲ ಪಕ್ಷ ಹೇಳಬೇಕು. ಪ್ರತಾಪ್ ಸಿಂಹ ಅಭ್ಯರ್ಥಿಯಾಗ್ತಾರೆ ಎಂದು ನಾನು ನಮ್ಮ ನಾಯಕರ ಬಳಿ ಮನವಿ ಮಾಡಿದ್ದೆ. ನಾನು ಅವರ ವಿರುದ್ಧ ಸ್ಪರ್ಧೆ ಮಾಡುತ್ತೇನೆ ಎಂದು. ಈಗ ರಾಜಮನೆತನದ ಯದುವೀರ್ ಮತ್ತು ನನ್ನ ನಡುವೆ ಸ್ಪರ್ಧೆ ಏರ್ಪಟ್ಟಿದೆ. ರಾಜ ಮನೆತನದ ಬಗ್ಗೆ ನಮಗೆ ಅಪಾರ ಗೌರವವಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಮೀಸಲಾತಿ ಜಾರಿಗೆ ತಂದವರು. ಮೀಸಲಾತಿ ವಿರುದ್ಧವಿರುವ ಬಿಜೆಪಿ ಪಕ್ಷದಿಂದ ಯದುವೀರ್ ಅಭ್ಯರ್ಥಿಯಾಗಿದ್ದಾರೆ. ಒಂದು ವೇಳೆ ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ್ದರೆ ನಾವು ಟಿಕೆಟ್ ಕೊಡಿಸುತ್ತಿದ್ದೆವು. ಯದುವೀರ್ ಮೇಲೆ ಒತ್ತಡ ಹಾಕಿ ಚುನಾವಣೆಗೆ ಕರೆ ತಂದಿದ್ದು ಯಾರೆಂದು ಪ್ರತಾಪ್ ಸಿಂಹ ತಿಳಿಸಲಿ. ಜನಸಾಮಾನ್ಯರ ಬಳಿಗೆ ಬರುವ ವ್ಯಕ್ತಿ ಬೇಕ ? ನಾವೇ ಅವರ ಮನೆ ಬಳಿಗೆ ಹೋಗುವ ವ್ಯಕ್ತಿ ಬೇಕ ? ಎಂದು ಪ್ರಶ್ನಿಸಿದ ಅವರು, ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶ ನೋಡಿದರೆ ನಮ್ಮ ಗೆಲುವಿಗೆ ಪೂರಕವಾದ ವಾತಾವರಣವಿದೆ ಎಂದರು.