ಚಾಮರಾಜನಗರ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್ಎಸ್) ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿಯೂ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ ಎಂದು ಪಕ್ಷದ ರಾಜ್ಯ ಸಂಘ ಟನಾ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಎಂ.ರವಿ ಕುಮಾರ್ ತಿಳಿಸಿದರು.
ಪ್ರಸ್ತುತ ದಿನಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಮಾಡುತ್ತಿವೆ. ಜಾತಿ, ಧರ್ಮದ ಹೆಸರಿನಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದೆ. ಆದರೆ, ಕೆಆರ್ಎಸ್ ಪಕ್ಷವೂ ಪ್ರಜ್ಞಾವಂತರನ್ನು ಹೊಂದಿರುವ ಪಕ್ಷವಾಗಿದೆ. ಇಲ್ಲಿ ಜನ ಸಾಮಾನ್ಯರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಪಕ್ಷದಿಂದ ಕಂದಹಳ್ಳಿ ಮಹೇಶ್ ಅವರಿಗೆ ಟಿಕೆಟ್ ನೀಡಲಾಗಿದೆ. ಇವರನ್ನು ಪಕ್ಷದ 5 ಜನ ಸದಸ್ಯರನ್ನೊಳಗೊಂಡ – ಸಮಿತಿಯು ಆಯ್ಕೆ ಮಾಡಿದೆ. ಪಕ್ಷವು ಸಾಮಾನ್ಯ ವ್ಯಕ್ತಿಗೆ ಅವಕಾಶ ನೀಡಿದೆ ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಸ್ಥಳೀಯ ಅಭ್ಯರ್ಥಿಯಾಗಿರುವ ಕಂದಹಳ್ಳಿ ಮಹೇಶ್ ಅವರು ಹೋರಾಟ ಮನೋಭಾವ ಹೊಂದಿದ್ದಾರೆ. ಅವರು ಚುನಾವಣೆಯಲ್ಲಿ ಹಣ, ಹೆಂಡ ಹಂಚುವುದಿಲ್ಲ. ಸಂವಿಧಾನದ ಆಶಯಗಳ ಪರವಾಗಿ ಚುನಾವಣೆಯನ್ನು ಎದುರಿಸುತ್ತೇವೆ ಎಂದರು.
ಈ ಬಾರಿಯ ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವ ಹಾಗೂ ನಿರಂಕುಶ ಪ್ರಭುತ್ವಗಳ ನಡುವಿನ ಹೋರಾಟವಾಗಿದೆ. ಸಾಮಾನ್ಯರು ಮತ್ತು ಸಂಪತ್ತು ಉಳ್ಳವರ ನಡುವೆ ನಡೆಯುತ್ತಿರುವ ಚುನಾವಣೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾದರೆ ಮತದಾರರು ಜನ ಪರವಾಗಿರುವವರನ್ನು ಲೋಕಸಭೆಗೆ ಆಯ್ಕೆ ಮಾಡಬೇಕಿದೆ ಎಂದರು.
ಕೆಆರ್ಎಸ್ ಪಕ್ಷದ ಅಭ್ಯರ್ಥಿ ಕಂದಹಳ್ಳಿ ಮಹೇಶ್ ಮಾತನಾಡಿ, ಕೆಆರ್ಎಸ್ ಪಕ್ಷವು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸಾಮಾನ್ಯ ವ್ಯಕ್ತಿಗೆ ಟಿಕೆಟ್ ನೀಡುವ ಮೂಲಕ ಅವಕಾಶ ಕಲ್ಪಿಸಿದೆ. ಪಕ್ಷವು ಭ್ರಷ್ಟಚಾರ ನಿರ್ಮೂಲನೆ ಮಾಡಲು ಪಣತೊಟ್ಟಿದೆ. ಮತದಾರರ ಪರ ನಿಂತು ಅವರ ಶ್ರೇಯೋಭಿವೃದ್ದಿಗೆ ಶ್ರಮಿಸಲು ಸಿದ್ದವಿದೆ. ಹೀಗಾಗಿ ಮತದಾರರು ಚುನಾವಣೆಯಲ್ಲಿ ಕೆಆರ್ಎಸ್ ಪಕ್ಷವನ್ನು ಬೆಂಬಲಿಸ ಬೇಕಿದೆ ಎಂದು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ಉಪಾಧ್ಯಕ್ಷ ಸೈಯದ್ ಸಮೀ, ಯಳಂದೂರು ತಾಲೂಕು ಅಧ್ಯಕ್ಷ ವೈ.ಕೆ.ಮೋಳೆ ರಂಗರಾಜು. ಪದಾಧಿಕಾರಿಗಳಾದ ರವೀಂದ್ರ, ನಿಸ್ವಾನ್, ಮುಬಾರಕ್ ಇದ್ದರು