ಪ್ರತಿನಿಧಿ ವರದಿ ಚಾಮರಾಜನಗರ
ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಅಕ್ರಮ ಸಕ್ರಮ ಯೋಜನೆ ಮರು ಜಾರಿಗೆ ಆಗ್ರಹಿಸಿ ಮಾ.26 ರಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಮೈಸೂರಿನ ಸೆಸ್ಕ್ ಎಂ.ಡಿ. ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹೇಳಿದರು.
ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದಲ್ಲಿ ನಡೆದ ಜಿಲ್ಲೆಯ ರೈತ ಪದಾಧಿಕಾರಿಗಳು ಮತ್ತು ಕೃಷಿ ಪಂಪ್ ಸೆಟ್ ಬಳಕೆದಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿ ಪಂಪ್ ಸೆಟ್ ಗಳಿಗೆ 10 ಗಂಟೆಗಳ ವಿದ್ಯುತ್ ಪೂರೈಕೆ ಮಾಡಬೇಕು. ಹಗಲು ವೇಳೆ ಸರ್ಕಾರದ ಆದೇಶದಂತೆ ಸಮರ್ಪಕ ವಿದ್ಯುತ್ ನೀಡಬೇಕು. ಕಳೆದ ಸಾಲಿನಲ್ಲಿ ಇದ್ದಂತೆ ಅಕ್ರಮ ಸಕ್ರಮ ಜಾರಿ ಮಾಡಬೇಕು. ಹೊಸ ವಿದ್ಯುತ್ ಸಂಪರ್ಕ ಪಡೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಸರ್ಕಾರದ ಆದೇಶವಿದೆ ಎಂದು ಯಾವುದೇ ನೋಂದಣಿ ಮಾಡಿಕೊಳ್ಳುತ್ತಿಲ್ಲ. ಮಾನವ ಮತ್ತು ಪ್ರಾಣಿಗಳ ಸಂಘರ್ಷ ತಡೆಯಲು ಪೂರಕವಾಗುವಂತೆ ಇಲಾಖೆಯಲ್ಲಿ ಟಿಸಿಗಳು ಸುಟ್ಟು ಹೋದರೆ 72 ಗಂಟೆಯಲ್ಲಿ ಸರಿಪಡಿಸಬೇಕೆನ್ನುವ ನಿಯಮವಿದ್ದರೂ ಇಲಾಖೆಯ ಕೆಳ ಹಂತದ ಅಧಿಕಾರಿಗಳು ತೀವ್ರ ವಿಳಂಬ ಮಾಡುತ್ತಿದ್ದಾರೆ. ಸೋಲಾರ್ ಪಂಪ್ ಸೆಟ್ ಅಳವಡಿಕೆಗೆ ಮೊದಲಿನಂತೆ 23 ಸಾವಿರ ರೂ. ಕಟ್ಟಿಸಿಕೊಂಡು ಸರ್ಕಾರವೇ ಉಳಿದ ಹಣವನ್ನು ತುಂಬಿ ರೈತರಿಗೆ ಸಂಪರ್ಕ ನೀಡಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ಅವಘಡಗಳಿಂದ ಮರಣ ಹೊಂದಿದ ಕುಟುಂಬಕ್ಕೆ 25 ಲಕ್ಷ ರೂ.ಪರಿಹಾರ ನೀಡಬೇಕು. ರೈತರು ಬೆಳೆದ ಕಬ್ಬು ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಹೋದರೆ 30ದಿನದ ಒಳಗೆ ಬೆಳೆ ನಷ್ಟದ ಪರಿಹಾರ ನೀಡಬೇಕು. ರಾಜ್ಯ ಸರ್ಕಾರ ಚುನಾವಣಾ ಪ್ರಣಾಳಿಕೆಯ ಭರವಸೆಯಂತೆ ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ನೀಡಬೇಕು. ವಾರ್ಷಿಕ ಸರಾಸರಿಯಂತೆ ವಿದ್ಯುತ್ ನೀಡುತ್ತೇವೆ ಎನ್ನುವ ನಿಯಮ ತೆಗೆದು ಹಾಕಬೇಕು. ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.26ರ ಬೆಳಗ್ಗೆ 11.30ಕ್ಕೆ ಸೆಸ್ಕ್ ಎಂ.ಡಿ. ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಸಭೆಯಲ್ಲಿದ್ದ ರೈತರು ತೀರ್ಮಾನಿಸಿದರು.
ಸಭೆಯಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಮೂಡಲಪುರ ಹಾಲಿನ ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜನ್ನೂರು ಶಾಂತರಾಜು, ಜಿಲ್ಲಾ ಉಪಾಧ್ಯಕ್ಷ ಮಲೆಯೂರು ಪ್ರವೀಣ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲೆಯೂರು ಮಹೇಂದ್ರ ಕುಮಾರ್, ತಾಲೂಕು ಅಧ್ಯಕ್ಷ ಅರಳಿಕಟ್ಟೆ ಕುಮಾರ್, ತಾಲೂಕು ಸಂಚಾಲಕ ಕಿಳಲಿಪುರ ಶ್ರೀಕಂಠಸ್ವಾಮಿ, ಪ್ರಭುಸ್ವಾಮಿ, ಮಲೆಯೂರು ಹರ್ಷ, ಮಹೇಂದ್ರ, ಬಸವರಾಜಪ್ಪ ಸೇರಿದಂತೆ ಇತರರು ಇದ್ದರು.
21ಸಿಎಚ್ಎನ್.2: ಚಾಮರಾಜನಗರದ ಶ್ರೀ ಚಾಮರಾಜೇಶ್ವರ ಉದ್ಯಾನವನದಲ್ಲಿ ಜಿಲ್ಲೆಯ ರೈತ ಪದಾಧಿಕಾರಿಗಳು ಮತ್ತು ಕೃಷಿ ಪಂಪ್ ಸೆಟ್ ಬಳಕೆದಾರರ ಸಭೆ ನಡೆಯಿತು.