ಪ್ರತಿನಿಧಿ ವರದಿ ಕೊಳ್ಳೇಗಾಲ
ಪಟ್ಟಣದ ಬಸ್ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ತೆರಳಲು ಸಕಾಲಕ್ಕೆ ರಸ್ತೆ ಸಾರಿಗೆ ಇಲ್ಲದ ಕಾರಣ ನೂರಾರು ವಿದ್ಯಾರ್ಥಿಗಳು ಪರದಾಡಿದ ಪ್ರಸಂಗ ನಡೆಯಿತಲ್ಲದೇ, ತಕ್ಷಣ ಬಸ್ ಸೌಲಭ್ಯ ಕಲ್ಪಿಸುವಂತೆ ಕೆಲ ಕಾಲ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕೇಂದ್ರದ ಶಾಲಾ, ಕಾಲೇಜುಗಳಿಗೆ ತೆರಳಲು ಬೆ.6.30ಗಂಟೆಯಲ್ಲಿ ವಿದ್ಯಾರ್ಥಿಗಳ ದಂಡು ಬಸ್ ನಿಲ್ದಾಣದಲ್ಲಿ ಜಮಾಯಿಸಿತ್ತು. ಈ ನಡುವೆ ಸಾರ್ವಜನಿಕರೂ ಬಸ್ಸಿಗಾಗಿ 1ಗಂಟೆಗೂ ಹೆಚ್ಚು ಕಾಲ ಕಾದು ಬಸವಳಿದರು. ಆದರೆ, ಸಕಾಲಕ್ಕೆ ಬಸ್ ಬಾರದ ಹಿನ್ನೆಲೆ, ಬೇಕೇ ಬೇಕು ಬಸ್ ಬೇಕು ಎಂದು ಘೋಷಣೆಗಳನ್ನು ಕೂಗಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಈ ನಡುವೆ ಮೈಸೂರು ಸೆರಿದಂತೆ ಇತರ ಮಾರ್ಗಕ್ಕೆ ತೆರಳಲು ನಿಲ್ದಾಣಕ್ಕೆ ಆಗಮಿಸಿದ ಕೆಲ ಬಸ್ ಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿ ಅವಿನಾಶ್ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿ, ಪ್ರತಿನಿತ್ಯ ಕೆಎಸ್ ಆರ್ಟಿಸಿ ಬಸ್ ಗಳು ಸರಿಯಾದ ಸಮಯಕ್ಕೆ ನಿಲ್ದಾಣಕ್ಕೆ ಬರುತ್ತಿಲ್ಲ. ಇದರಿಂದ ನಮಗೆ ಕಾಲೇಜಿಗೆ ಹೋಗಲು ನಿತ್ಯವೂ ತೊಂದರೆ ಉಂಟಾಗುತ್ತಿದೆ. ಹೆಚ್ಚಿನ ಬಸ್ ಗಳನ್ನು ಮೈಸೂರಿಗೆ ಬಿಟ್ಟಿದ್ದಾರೆ. ಆದರೆ, ನಿತ್ಯ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಚಾಮರಾಜನಗರಕ್ಕೆ ಹೋಗಲು ಅಗತ್ಯ ಬಸ್ ವ್ಯವಸ್ಥೆಯನ್ನು ರಸ್ತೆ ಸಾರಿಗೆ ಇಲಾಖೆ ಅಧಿಕಾರಿಗಳು ಮಾಡುತ್ತಿಲ್ಲ. ಹಾಗಾಗಿ ನಮ್ಮ ಜಿಲ್ಲೆಗೆ ಬಸ್ ಗಳ ಸಂಚಾರ ಕಡಿಮೆ ಇದೆ. ಇಲ್ಲಿನ ಕೆಎಸ್ ಆರ್ ಟಿಸಿ ಬಸ್ ಡಿಪೋ ವ್ಯವಸ್ಥಾಪಕರು, ಬಸ್ ಗಳನ್ನು ಹೆಚ್ಚಾಗಿ ಮೈಸೂರಿಗೆ ಹಾಗೂ ಹೊರ ಜಿಲ್ಲೆಗಳಿಗೆ ಬಿಡುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಚಾಮರಾಜನಗರಕ್ಕೆ ಹೋಗಬೇಕಾದ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ನಿಲ್ದಾಣದಲ್ಲಿ ಬೇರೆ ಮಾರ್ಗಕ್ಕೆ ತೆರಳುವ ಯಾವ ಬಸ್ ಗಳನ್ನು ಮುಂದೆ ಸಂಚರಿಸಲು ಬಿಡದೆ ಬಸ್ ಮುಂದೆ ಕುಳಿತು ಪ್ರತಿಭಟಿಸಿದರು. ಇದರಿಂದ ಎಚ್ಚೆತ್ತ ಬಸ್ ನಿಲ್ದಾಣದ ಕೆಎಸ್ ಆರ್ ಟಿಸಿಯ ಸಂಚಾರಿ ನಿಯಂತ್ರಣಾಧಿಕಾರಿ ನಾಗರಾಜು, ಮೈಸೂರು ಮಾರ್ಗಕ್ಕೆ ಹೋಗಬೇಕಾಗಿದ್ದ ಎರಡು ಬಸ್ ಗಳನ್ನು ತಕ್ಷಣ ಚಾಮರಾಜನಗರಕ್ಕೆ ಕಳುಹಿಸಿದರು. ಪರಿಣಾಮ, ವಿದ್ಯಾರ್ಥಿಗಳನ್ನು ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಮನೋಜ್, ರಾಘವೇಂದ್ರ, ಮಂಜುನಾಥ್, ಸುನಿಲ್, ಮಹದೇವ, ಸುಶ್ಮಿತಾ, ರಮ್ಯಾ, ಸಿಂಧು ಸೇರಿದಂತೆ ಇತರರು ಇದ್ದರು.
21ಕೆಜಿಎಲ್-4
ಫೋಟೋ ಶೀರ್ಷಿಕೆ:
ಕೊಳ್ಳೇಗಾಲ ಪಟ್ಟಣದ ಬಸ್ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ತೆರಳಲು ಸಕಾಲಕ್ಕೆ ರಸ್ತೆ ಸಾರಿಗೆ ಇಲ್ಲದ ಕಾರಣ ನೂರಾರು ವಿದ್ಯಾರ್ಥಿಗಳು ಪರದಾಡಿದರು.