ಪ್ರತಿನಿಧಿ ವರದಿ ಕಿಕ್ಕೇರಿ
ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆ ನೇಣಿಗೆ ಶರಣಾಗಿದ್ದಾರೆ.
ಗ್ರಾಮದ ರಾಜೇಂದ್ರ, ಮಂಜುಳಾ ದಂಪತಿಯ ಪುತ್ರಿ ಎಲ್.ಆರ್. ಪ್ರೇಮಕುಮಾರಿ(೨೬) ಮೃತರು. ರಾಜೇಂದ್ರ ಅವರ ೩ನೇ ಪುತ್ರಿಯಾದ ಈಕೆಯನ್ನು ಮೈಸೂರಿನ ಎನ್.ಆರ್. ಮೊಹಲ್ಲಾ ನಿವಾಸಿ ಕುಮಾರಸ್ವಾಮಿ ಅವರ ಪುತ್ರ ರಾಘವೇಂದ್ರನಿಗೆ ೨ವರ್ಷಗಳ ಹಿಂದೆ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ವಿವಾಹದ ವೇಳೆ ೧೫೦ಗ್ರಾಂ. ಚಿನ್ನ, ೫ಲಕ್ಷ ರೂ. ನಗದು ವರದಕ್ಷಿಣೆಯಾಗಿ ನೀಡಲಾಗಿತ್ತು ಎನ್ನಲಾಗಿದೆ.
ಅರಂಭದ ಕೆಲವು ತಿಂಗಳು ಅನೋನ್ಯವಾಗಿ ಬಾಳ್ವೆ ನಡೆಸುತ್ತಿದ್ದರು. ಕೆಲವು ತಿಂಗಳ ನಂತರ ಹಣದ ದಾಹ ಗಂಡನ ಮನೆಯವರ ಮನ ಹೊಕ್ಕಿದೆ. ಪರಿಣಾಮ, ಮತ್ತಷ್ಟು ಹಣವನ್ನು ವರದಕ್ಷಿಣೆಯಾಗಿ ತವರು ಮನೆಯಿಂದ ತರಲು ಆಗಿಂದಾಗ್ಗೆ ಹಿಂಸೆ ನೀಡಲು ಆರಂಭಿಸಿದ್ದಾರೆ. ನಿತ್ಯ ಗಲಾಟೆ, ಹೊಡೆಯುವುದು, ಬೆದರಿಕೆ ಹಾಕುವುದು ನಡೆದಿದೆ. ಈ ಕುರಿತು ಸಾಕಷ್ಟು ರಾಜಿ, ಪಂಚಾಯಿತಿಗಳು ನಡೆದಿವೆ. ಯಾವುದೂ ಪ್ರಯೋಜನವಾಗದೆ, ಹಿಂಸೆ ತಾಳಲಾರದೆ ವರ್ಷದ ಹಿಂದೆ ತವರು ಮನೆಯವರು ಪ್ರೇಮಕುಮಾರಿಯನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು.
ದಾಂಪತ್ಯ ಕಲಹದ ಸಂಬಂಧ, ವರದಕ್ಷಿಣೆ ಕಿರುಕುಳ ಸಂಬಂಧ ಕಿಕ್ಕೇರಿ, ಕೆ.ಆರ್.ಪೇಟೆ ಪೊಲೀಸರಲ್ಲಿ ದೂರು ನೀಡಲಾಗಿತ್ತು. ಕೆ.ಆರ್.ಪೇಟೆ ನ್ಯಾಯಾಲಯದಲ್ಲಿ ದಾವೆ ಕೂಡ ಹೂಡಲಾಗಿತ್ತು.
ಪ್ರೇಮಕುಮಾರಿ ತನ್ನ ಭವಿಷ್ಯ ರೂಪಿಸಿಕೊಳ್ಳಲು ಹಾಸನದಲ್ಲಿ ಎಲ್ಎಲ್ಬಿ ವ್ಯಾಸಂಗಕ್ಕಾಗಿ ಸೇರಿಕೊಂಡಿದ್ದಳು. ಕಳೆದ ವಾರ ರಾಘವೇಂದ್ರ ತನ್ನ ಕುಟುಂಬದರೊಂದಿಗೆ ಸೇರಿಕೊಂಡು ಹಣ ತಂದುಕೊಡಲು ಈಕೆಗೆ ಫೋನ್ ಮೂಲಕ ಕರೆ ಮಾಡಿ ಬೆದರಿಕೆ ಹಾಕಿದ್ದನು. ಹಣ ನೀಡಲು ನಿರಾಕರಿಸಿದರೆ ಸುಫಾರಿ ಕೊಟ್ಟು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ.
ಪತಿ, ಆತನ ಕುಟುಂಬದವರ ಬೆದರಿಕೆಗೆ ಹೆದರಿ ಡೆತ್ನೋಟ್ ಬರೆದು ತವರು ಮನೆ ಲಿಂಗಾಪುರದಲ್ಲಿ ನೇಣು ಬಿಗಿದುಕೊಂಡು ಪ್ರೇಮಕುಮಾರಿ ಮಾ.೨೦ರ ಬುಧವಾರ ಸಂಜೆ ಸಾವಿಗೆ ಶರಣಾಗಿದ್ದಾರೆ.
ವಿಷಯ ತಡವಾಗಿ ಬೆಳಕಿಗೆ ಬಂದು ಮೃತಳ ತಾಯಿ ಮಂಜುಳಾ ಕಿಕ್ಕೇರಿ ಪೊಲೀಸರಿಗೆ ದೂರು ನೀಡಿದ್ದಾರೆ. ಶವವನ್ನು ಪಂಚಾನಾಮೆ ನಡೆಸಿ ವಾರಸುದಾರರಿಗೆ ಪೊಲೀಸರು ಒಪ್ಪಿಸಿದ್ದಾರೆ. ಕಿಕ್ಕೇರಿ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
೨೨ಕೆಕೆಆರ್೧
ಕಿಕ್ಕೇರಿ ಸಮೀಪದ ಲಿಂಗಾಪುರ ಗ್ರಾಮದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಆತ್ಮಹತ್ಯೆಗೆ ಬಲಿಯಾದ ಮಹಿಳೆ ಪ್ರೇಮಕುಮಾರಿ.