ರಾಮನಗರ : ನಿಮ್ಮಲ್ಲಿರುವ ಹುರುಪು ಮತ್ತು ಉತ್ಸಾಹ ನೋಡಿದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಮಗೆ ಗೆಲುವು ಖಚಿತ ಎಂದೆನಿಸುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಹೇಳಿದರು. ಶನಿವಾರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೂಟಗಲ್ ಗ್ರಾಮ ಪಂಚಾಯಿತಿ ಜೆಡಿಎಸ್ ಭದ್ರಕೋಟೆಯಾಗಿದೆ. ಬಿಜೆಪಿ ಸೇರಿದ ಪರಿಣಾಮ ಇಡೀ ಕ್ಷೇತ್ರವೇ ಸುಭದ್ರ ಕೋಟೆಯಾಗಿದೆ. ಆರೋಗ್ಯ ಕ್ಷೇತ್ರದಲ್ಲಿ 35 ವರ್ಷಗಳ ಕಾಲ ಸುಮಾರು 75 ಲಕ್ಷ ಜನರಿಗೆ ಚಿಕಿತ್ಸೆ ಕೊಡಿಸಿದ್ದೇನೆ. ವೈದ್ಯಕೀಯ ಸೇವೆ ನೀಡುತ್ತಿರುವ ಸಂದರ್ಭ ಸುಮಾರು ಎರಡು ಕೋಟಿ ಜನರ ಸಂಪರ್ಕಕ್ಕೆ ಬಂದಿದ್ದೇನೆ. ಬೆಂಗಳೂರು ಗ್ರಾಮಾಂತರ ಮಾತ್ರವಲ್ಲದೆ ಇಡೀ ರಾಜ್ಯದ ಜನ ನನ್ನನ್ನು ಗುರುತಿಸಿದ್ದಾರೆ. ನಾನು ನಿರ್ದೇಶಕನಾದರೆ ಪಂಚತಾರಾ ಖಾಸಗಿ ಆಸ್ಪತ್ರೆ ಮಾಡಬೇಕು ಎಂದುಕೊಂಡಿದ್ದೆ. ಆದರೆ ಇದೀಗ ಅಂತದ್ದೇ ಸಾಧನೆ ಮಾಡಿದ ಖುಷಿ ನನಗಿದೆ. ರೈತರಿಗೆ ಮತ್ತು ಬಡವರಿಗೆ ಅತ್ಯುತ್ತಮ ಚಿಕಿತ್ಸೆ ಕೊಡಿಸಿದ್ದೇನೆ ಎಂದು ಹೇಳಿದರು.