ಚಾಮರಾಜನಗರ : ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನಲ್ಲಿರುವ ಅಂತರರಾಜ್ಯ ಗಡಿ ಪ್ರದೇಶವಾದ ಬಾವಲಿ ಹಾಡಿ ಬಳಿ ತೆರೆದಿರುವ ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ರದ್ದುಪಡಿಸುವಂತೆ ಆಗ್ರಹಿಸಿ ಬಾವಲಿ(ಕಡೆಗದ್ದೆ) ಹಾಡಿಯ ನಿವಾಸಿಗಳು ಉಪ ವಿಭಾಗಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಡಳಿತ ಭವನಕ್ಕೆ ತೆರಳಿ ಉಪವಿಭಾಗಾಧಿಕಾರಿ ಶಿವಮೂರ್ತಿ ಹಾಗೂ ತಹಸೀಲ್ದಾರ್ ಬಸವರಾಜು ಅವರಿಗೆ ಮನವಿ ಸಲ್ಲಿಸಿದರು.
ಬಾವಲಿ ಹಾಡಿ ಗ್ರಾಮದಲ್ಲಿ ಅಬಕಾರಿ ಇಲಾಖೆಯ ಆಯುಕ್ತ ಮಂಜುನಾಥ್ ಎಂಬುವವರು ಈ ಹಿಂದೆ ಕಬಿನಿ ಸ್ಟಿಂಗ್ ರೆಸಾರ್ಟ್ ಹೊಂದಿದ್ದು, ಇಲ್ಲಿಗೆ ಸಿ.ಎಲ್.2 ಮತ್ತು ಸಿ.ಎಲ್.7 ಬಾರ್ ಅಂಡ್ ರೆಸ್ಟೋರೆಂಟ್ ಹೊಂದಿದ್ದರು. ಆದರೆ ಬಾವಲಿ ಹಾಡಿಯ ಪ್ರದೇಶವು ಅಂತರರಾಜ್ಯ ಗಡಿಪ್ರದೇಶವಾಗಿದ್ದು, ಕೇವಲ 20 ಮೀ.ಅಂತರದಲ್ಲಿ ಗಿರಿಜನರ ಹಾಡಿ ಇದ್ದು, ಜತೆಗೆ ಪಕ್ಕದಲ್ಲಿ ಕಪಿಲ ನದಿ ಹರಿಯುತ್ತದೆ ಎಂದು ತಿಳಿಸಿದ್ದಾರೆ.
ಈ ರೆಸಾರ್ಟ್ ಗೆ ಕೇರಳ ರಾಜ್ಯದಿಂದ ಜನರು ಮದ್ಯ ಸೇವಿಸಲು ಬಂದು ಕುಡಿದ ಮತ್ತಿನಲ್ಲಿ ಪಕ್ಕದಲ್ಲಿರುವ ಹಾಡಿ ಮನೆಗಳಿಗೆ ನುಗ್ಗಿ ಗಿರಿಜನರ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಅನೇಕ ಬಾರಿ ಗಲಾಟೆಗಳು ಸಹ ನಡೆದಿವೆ. ಈ ಪ್ರದೇಶವು ನಕ್ಸಲ್ ಚಟುವಟಿಕೆಯ ತಾಣವಾಗಿರುವ ಹಿನ್ನೆಲೆಯಲ್ಲಿ ಈ ಎಲ್ಲ ಕಾರಣಗಳನ್ನು ಇಟ್ಟುಕೊಂಡು 2014 ರಲ್ಲಿ ಮೈಸೂರು ಜಿಲ್ಲಾಧಿಕಾರಿಗಳಾಗಿದ್ದ ಶಿಖಾ ಅವರು ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ರದ್ದುಪಡಿಸಿದ್ದರು ಎಂದು ತಿಳಿಸಿದ್ದಾರೆ.
ಅಂದಿನಿಂದ ಈ ರೆಸಾರ್ಟ್ ನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಇರಲಿಲ್ಲ. ಇದರಿಂದ ಹಾಡಿಯಲ್ಲಿ ವಾಸಮಾಡುವ ಗಿರಿಜನರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಆದರೆ ಅಬಕಾರಿ ಆಯುಕ್ತ ಮಂಜುನಾಥ್ ಅವರು ಅಧಿಕಾರ ದುರುಪಯೋಗ ಮಾಡಿಕೊಂಡು ಅಬಕಾರಿ ಅಧಿಕಾರಿಗಳ ಮೇಲೆ ಒತ್ತಡ ತಂದು ಕಬಿನಿ ಸ್ಟಿಂಗ್ ರೆಸಾರ್ಟ್ ಹೆಸರನ್ನು ಬದಲಾಯಿಸಿ ಕೆ.ಎಸ್.ರೆಸಾರ್ಟ್ ಎಂದು ಮರುನಾಮಕರಣ ಮಾಡಿ ಸಿ.ಎಲ್.7ಬಾರ್ ಅಂಡ್ ರೆಸ್ಟೋರೆಂಟ್ ಪುನರ್ ಆರಂಭ ಮಾಡಿದ್ದಾರೆ ಎಂದು ತಿಳಿಸಿದರು.
ನಂತರ ಹಾಡಿಯ ಜನರು ಈ ಬಾರ್ ಅನ್ನು ರದ್ದು ಮಾಡುವಂತೆ ಸಂಬಂದಿಸಿದ ಇಲಾಖೆಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಇದನ್ನು ಪ್ರಶ್ನಿಸಿದ ನಮ್ಮ ಮೇಲೆ ಮಂಜುನಾಥ್ ಕಡೆಯವರು ಹಲ್ಲೆ ನಡೆಸಲು ಮುಂದಾಗುತ್ತಾರೆ. ಆದ್ದರಿಂದ ಅಕ್ರಮವಾಗಿ ಹಾಗೂ ಕಾನೂನು ಉಲ್ಲಂಘನೆ ಮಾಡಿ ಬಾರ್ ಅಂಡ್’ರೆಸ್ಟೋರೆಂಟ್ ತೆರೆದಿರುವ ಅಬಕಾರಿ ಇಲಾಖೆಯ ಆಯುಕ್ತ ಮಂಜುನಾಥ್ ವಿರುದ್ದ ಕಾನೂನು ಕ್ರಮ ಕೈಗೊಂಡು, ಸಿ.ಎಲ್ ರದ್ದು ಪಡಿಸಬೇಕು. ಇಲ್ಲದಿದ್ದರೆ ಬಾರ್ ಮುಂದೆ ಆದಿವಾಸಿಗಳೆಲ್ಲರೂ ಸೇರಿ ಅನಿರ್ಧಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಯಮ್ಮ, ಭಾಗ್ಯ, ಸುಬ್ರಹ್ಮಣ್ಯ, ಸುಬ್ಬು, ಚಂದ್ರು, ಮಹೇಶ್, ರಾಜೇಶ್, ಸಣ್ಣಪ್ಪ, ಚಿನ್ನಪ್ಪ, ಸಿ.ಕೆ.ರಾಜು, ನಾಗೇಶ್, ಅಮ್ಮಣ್ಣಿ, ಜಯಮ್ಮ, ಸುಂದ್ರಿ, ರುಕ್ಮಿಣಿ, ಮಾರೇ, ಕಾಳಿ, ಸರೋಜಿನಿ, ಬಿಂದು, ಜಾನು, ದೀಪು, ಲೀಲೆ ಇದ್ದರು.