ಚಾಮರಾಜನಗರ : ಬಿಜೆಪಿ ನಾಯಕ ಸಮುದಾಯಕ್ಕೆ ಅನ್ಯಾಯ ಮಾಡಿದೆ, ಅದಕ್ಕಾಗಿ ನಾವು ಕಾಂಗ್ರೆಸ್ ಪಕ್ಷವನ್ನು ಸೇರುತ್ತೇವೆ ಎಂದು ಯಾವತ್ತು ಸಹ ಹೇಳಿಲ್ಲ. ಕೆಲ್ಲಂಬಳ್ಳಿ ಸೋಮನಾಯಕ ನಮ್ಮ ವಿರುದ್ದ ಮಾಡಿರುವ ಆರೋಪಗಳೆಲ್ಲ ಸತ್ಯಕ್ಕೆ ದೂರವಾದುದ್ದು ಎಂದು ಕೇಂದ್ರ ಪರಿಹಾರ ನಿಗಮದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಎಂ.ರಾಮಚಂದ್ರ ಹೇಳಿದರು.
ನಾವು ಯಾವತ್ತು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಬಗ್ಗೆ ಯೋಚನೆ ಮಾಡಿಲ್ಲ. ನಾವು ಎಲ್ಲಿಯೂ ಕೂಡ ಆ ಬಗ್ಗೆ ಮಾತನಾಡಿರುವುದಿಲ್ಲ. ಯಾವುದೇ ಹೋಟೆಲ್ ನಲ್ಲಿ ಸಭೆಯನ್ನು ಮಾಡಿರುವುದಿಲ್ಲ. ಸೋಮನಾಯಕ ಅವರು ಸುಖಾ ಸುಮ್ಮನೆ ಆಪಾದನೆ ಮಾಡುವುದನ್ನು ಬಿಡಬೇಕು. ಪತ್ರಿಕೆಗಳ ಮೂಲಕ ನಮ್ಮನ್ನು ತೇಜೋವಧೆ ಮಾಡುತ್ತಿದ್ದಾರೆ. ಅವರು ನಾಯಕ ಸಮುದಾಯವನ್ನು ಹಾಗೂ ಬಿಜೆಪಿಯನ್ನು ಗುತ್ತಿಗೆ ತೆಗೆದುಕೊಂಡಿಲ್ಲ ಎಂದು ಸುದ್ದಿಗೋಷ್ಟಿಯಲ್ಲಿ ವಾಗ್ದಾಳಿ ನಡೆಸಿದರು.
ಇದೇ ತಿಂಗಳು 16 ರಂದು ಚಾಮರಾಜನಗರದಲ್ಲಿ ನಡೆದ ಎಸ್ಟಿ ಮುನ್ನಡೆ ಸಮಾವೇಶ ಕಾರ್ಯಕ್ರಮದಲ್ಲಿ ನಾಯಕ ಸಮಾಜಕ್ಕೆ ಬಿಜೆಪಿ ಅನೇಕ ಕೊಡುಗೆಗಳನ್ನು ನೀಡಿದೆ. ಆ ಋಣವನ್ನು ನಾವು ತೀರಿಸಬೇಕಾಗಿದೆ ಎಂದು ಮಾತನಾಡಿದ್ದೇನೆ. ಆದರೆ ಕೆಲ್ಲಂಬಳ್ಳಿ ಸೋಮನಾಯಕ ಅವರು ನಾನು ಸೇರಿದಂತೆ ಎಂ.ಅಪ್ಪಣ್ಣ, ಮಾಜಿ ಮಹಾಪೌರ ಶಿವಕುಮಾರ್, ಮಲ್ಲೇಶನಾಯಕ, ಮಾಜಿ ಎಂಎಲ್ಸಿ ಸಿದ್ದರಾಜು ಅವರು ನಾಯಕ ಸಮುದಾಯವನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ನಮ್ಮ ವಿರುದ್ದ ಈ ರೀತಿಯ ಸುಳ್ಳು ಆಪಾದನೆಯನ್ನು ಅವರು ಏಕೆ ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ. ಈ ರೀತಿ ಆಪಾದನೆ ಮಾಡುವುದರಿಂದ ಅವರಿಗೆ ಲಾಭವಿದೆ ಎನ್ನುವುದಾದರೆ ಸಂತೋಷ ಎಂದರು.
ನಾನು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರ್ಡೆಗೊಂಡಿದ್ದೇನೆ. ಅಂದಿನಿಂದ ಪಕ್ಷದಲ್ಲಿ ಎಸ್ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ, ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷನಾಗುವುದರ ಜತೆಗೆ ಅನೇಕ ಹುದ್ದೆಗಳನ್ನು ಪಕ್ಷದಲ್ಲಿ ಮಾಡಿದ್ದೇನೆ. ಹೀಗಿರುವಾಗ ನಾನು ಯಾವತ್ತು ಸಹ ಕಾಂಗ್ರೆಸ್ ಪಕ್ಷವನ್ನು ಸೇರುವ ಬಗ್ಗೆ ಚಿಂತೆಯನ್ನು ಮಾಡಿಲ್ಲ. ಅದನ್ನು ಕೆಲ್ಲಂಬಳ್ಳಿ ಸೋಮನಾಯಕ ಅವರು ಮರೆತು ಬಿಡಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಮಲ್ಲೇಶ್ ನಾಯಕ, ಕಪಿನಿ ನಾಯಕ, ಸುರೇಶ್ ಇದ್ದರು.