ಹುಣಸೂರು
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉಮೇದುವಾರರಿಗೆ ಅರಣ್ಯ ಅವಲಂಬಿತ ಆದಿವಾಸಿಗಳ ಅಭಿಲಾಷೆಗಳು ಹಾಗೂ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುವ ಸಲುವಾಗಿ ಆದಿವಾಸಿಗಳ ಜನತಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ತಿಳಿಸಿದರು.
ನಗರದ ಡೀಡ್ ಸಂಸ್ಥೆ ಕಚೇರಿಯಲ್ಲಿ ಶನಿವಾರ ಆಯೋಜನೆಗೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಆದಿವಾಸಿಗಳ ದಶಕಗಳ ಕಾಲದ ಹೋರಾಟದ ನಂತರವೂ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಈ ಹಿನ್ನಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ವಿವಿಧ ಪಕ್ಷಗಳಿಂದ ಸ್ಫರ್ಧಿಸುತ್ತಿರುವ ಉಮೇದುವಾರರು ಈ ಕೆಳಕಂಡ ಆದಿವಾಸಿಗಳ ಬಹುಮುಖ್ಯ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದಲ್ಲಿ ಮಾತ್ರ ಮತ ಹಾಕುವ ನಿರ್ಧಾರವನ್ನು ಒಮ್ಮತದಿಂದ ನಿರ್ಧರಿಸಲಾಗಿದೆ. ಆದಿವಾಸಿ ಜನತಾ ಪಾರ್ಲಿಮೆಂಟ್ ಸಮಿತಿ ಜನವರಿ-೨೬-೨೦೨೪ರಂದು ಕೈಗೊಂಡು ಸರ್ಕಾರಗಳಿಗೆ ಸಲ್ಲಿಸಿರುವ ೧೮ ನಿರ್ಣಯಗಳನ್ನು ಜಾರಿಗೊಳಿಸಲು ಕ್ರಮವಹಿಸಬೇಕು. ೨೦೦೯ರ ಏಪ್ರಿಲ್ ೩ರಂದು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರೊ. ಅಸ್ಸಾದಿ ವರದಿಯ ಶಿಫಾರಸ್ಸಿನನ್ವಯ ೩೪೧೮ ಆದಿವಾಸಿ ಕುಟುಂಬಗಳಿಗೆ ತಲಾ ೫ ಎಕರೆ ಭೂಮಿ ಹಾಗೂ ಯೋಗ್ಯ ಪುರ್ನವಸತಿ ನೀಡಬೇಕು. ಅರಣ್ಯವಾಸಿ ಹಾಗೂ ಮೂಲನಿವಾಸಿ ಬುಡಕಟ್ಟುಗಳ ಅಸ್ಮಿತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಆದಿವಾಸಿ ಅಭಿವೃದ್ದಿ ಮಂಡಳಿ ರಚಿಸಿ ಅಭಿವೃದ್ದಿಕಾರ್ಯ ಕೈಗೊಳ್ಳಬೇಕು. ಆದಿವಾಸಿ ಹಾಡಿಗಳ ಯಜಮಾನರು ಹಾಗೂ ದೇವರಗುಡ್ಡರಿಗೆ ಗೌರವಧನ, ಆದಿವಾಸಿಗಳ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿ ಮಾಡಬೇಕು. ಎಂದು ಅವರು ಒತ್ತಾಯಿಸಿದರು.
ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಮಾತನಾಡಿ, ಸರ್ಕಾರ ಆದಿವಾಸಿಗಳಿಗೆ ನೀಡಿರುವ ಕೃಷಿ ಭೂಮಿಯನ್ನು ಪಕ್ಕಾಪೋಡು ಮಾಡಿ ಅಂತಿಮ ದಾಖಲೆ ನೀಡಿ ಪೋಡಿ ಮುಕ್ತ ಹಾಡಿಗಳನ್ನಾಗಿ ಘೋಷಿಸುವ ಕಾರ್ಯ ಶೀಘ್ರ ಮಾಡಬೇಕು. ಮೀಸಲಾತಿಯ ಉಪಯೋಗ ಆದಿವಾಸಿಗಳಿಗೆ ದೊರಕಲು ಒಳಮೀಸಲಾತಿಯನ್ನು ಜಾರಿU ೆತಂದು ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಅವರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಅವಕಾಶ ಮಾಡಬೇಕು. ಯುವಜನರಿಗೆ ವಿವಿಧ ಕೌಶಲ್ಯಗಳ ತರಬೇತಿ ನೀಡಿ ಸಂಪಾದನೆಯ ಹೊಸ ಮಾರ್ಗಗಳನ್ನು ದೊರಕಿಸಿ ಆಧುನಿಕ ಸಮಾಜದೊಡನೆ ಮುಖಾಮುಖಿಯಾಗಲು ಅನುಕೂಲ ಮಾಡುವುದು ಅಗತ್ಯ. ಐದನೇಅನುಸೂಚಿತ ಪ್ರದೇಶದ ವ್ಯಾಪ್ತಿಯಲ್ಲಿ ಹಾಡಿಗಳನ್ನು ಹಾಗೂ ಅವರ ಅರಣ್ಯಗಳನ್ನು ತಂದು ಪೇಸಾ ಕಾಯ್ದೆ ೧೯೯೬ (ಆದಿವಾಸಿ ಪಂಚಾಯಿತಿ/ ಸ್ವಯಂ ಆಡಳಿತ ಕಾಯ್ದೆ)ನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ದಲಿತ ಚಳುವಳಿ ನವನಿರ್ಮಾಣ ವೇದಿಕೆ ಮುಖ್ಯಸ್ಥ ಹರಿಹರ ಆನಂದಸ್ವಾಮಿ ಮಾತನಾಡಿ, ಅರಣ್ಯಗಳು ಆದಿವಾಸಿಗಳ ಪಾರಂಪರಿಕಜೀವನ ನಿರ್ವಹಣೆಯ ತಾಣಗಳಾಗಿದ್ದು, ವನ್ಯಜೀವಿ ಸಂರಕ್ಷಣೆಯ ಹೆಸರಿನಲ್ಲಿ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಬಾರದು. ಬದಲಾಗಿ ಆದಿವಾಸಿಗಳನ್ನು ಅರಣ್ಯರಕ್ಷಕರೆಂದು ಘೋಷಿಸಿ ಇಲಾಖೆಗಳು ಅವರಿಗೆ ಮಾರ್ಗದರ್ಶನ ನೀಡಬೇಕು. ಆದಿವಾಸಿಗಳಿಗೆ ನಗರದಲ್ಲಿ ಒಂದು ಹಾಡಿ ಯೋಜನೆಯನ್ನು ಜಾರಿಗೆ ತಂದು ಕನಿಷ್ಠ ೧೦೦ ಕುಟುಂಬಗಳಾದರೂ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಡೀಡ್ ಸಂಸ್ಥೆಯ ಪ್ರ್ರಕಾಶ್, ಹರ್ಷ, ಜಯಪ್ಪ ಇತರರು ಇದ್ದರು.
೨೩ಊUಓ೨: ಹುಣಸೂರು ನಗರದ ಡೀಡ್ ಸಂಸ್ಥೆಯ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ದಲಿತ ಮುಖಂಡ ಹರಿಹರ ಆನಂದಸ್ವಾಮಿ ಮಾತನಾಡಿದರು. ಪ್ರಕಾಶ್, ಡಾ.ಎಸ್.ಶ್ರೀಕಾಂತ್, ಪಿ.ಕೆ.ರಾಮು, ಜಯಪ್ಪ ಇದ್ದಾರೆ.