ಮಾಜಿ ಸಚಿವ ಎನ್. ಮಹೇಶ್ ಗುಡುಗು । ತಿ.ನರಸೀಪುರದಲ್ಲಿ ಬಿಜೆಪಿ ಸಭೆ
ಪ್ರತಿನಿಧಿ ವರದಿ ತಿ.ನರಸೀಪುರ
ಸ್ವಜನ ಪಕ್ಷಪಾತ, ಹಗರಣ ಮತ್ತು ಭ್ರಷ್ಟಾಚಾರಕ್ಕೆ ಹೆಸರಾದ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಮಿತ್ರ ಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕಂಡು ತಲ್ಲಣ ಶುರುವಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಮತ್ತು ಮಾಜಿ ಸಚಿವ ಎನ್. ಮಹೇಶ್ ಹೇಳಿದರು.
ಪಟ್ಟಣದ ಜೆಎಸ್ ಎಸ್ ಸಭಾಭವನದಲ್ಲಿ ನಡೆದ ತಿ.ನರಸೀಪುರ ಮಂಡಲದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆ ಪೂರ್ವ ಸಮೀಕ್ಷೆಗಳಲ್ಲಿ ಎನ್ ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸಂಸತ್ ಸ್ಥಾನಗಳನ್ನು ಗೆಲ್ಲಲಿದೆ ಎಂಬ ವರದಿ ಬಂದಿದ್ದು, ಮೋದಿ ಅವರ ವೇಗ, ಬಿರುಸನ್ನು ಕಂಡು ಇಂಡಿಯಾ ಮೈತ್ರಿಕೂಟದಲ್ಲಿ ಈಗಾಗಲೇ ತಳಮಳ ಶುರುವಾಗಿದೆ. ಸೋಲಿನ ಭಯದಿಂದ ಹತಾಶೆಗೊಂಡ ಇಂಡಿಯಾ ಮೈತ್ರಿಕೂಟದ ನಾಯಕರು ಪ್ರಧಾನಿ ನರೇಂದ್ರ ಮೋದಿ ವಿರುದ್ದ ಅಸಂಬದ್ಧ ಹೇಳಿಕೆಗಳನ್ನು ನೀಡುವ ಮೂಲಕ ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದರು.
ಅಕ್ರಮ ಮದ್ಯ ನೀತಿ ರೂಪಿಸಿದ ಪರಿಣಾಮ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನನ್ನು ಇಡಿ ಬಂಧಿಸಿದೆ. ಆದರೆ ಸೋಲಿನ ಭಯದಿಂದ ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಂತ್ರಿಗಳು ಮೋದಿಯವರಿಗೆ ಈ ಘಟನೆಯನ್ನು ತಳಕು ಹಾಕಿ ಟೀಕೆ ಮಾಡುತ್ತಿರುವುದು ಅವರ ನೀಚ ಮಾನಸಿಕ ಸ್ಥಿತಿಯನ್ನು ತಿಳಿಸುತ್ತದೆ ಎಂದರು.
ಜನ್ ಧನ್ ಖಾತೆಗಳ ಬಗ್ಗೆ ಹಲವರು ಕುಹಕವಾಡಿದ್ದರು. ದೇಶದ 52 ಕೋಟಿ ಜನ್ ಧನ್ ಖಾತೆಗಳಿಗೆ ಕೇಂದ್ರ ಸರ್ಕಾರದ 180 ಯೋಜನೆಗಳ 30ಲಕ್ಷ ಕೋಟಿ ರೂ ಹಣ ಜಮೆಯಾಗಿದೆ. ಇದು ಯಾವುದೇ ಮಧ್ಯವರ್ತಿಗಳ ಸಂಪರ್ಕವಿಲ್ಲದೆ ಸರ್ಕಾರದ ಯೋಜನೆಗಳನ್ನು ನೇರ ಜನರಿಗೆ ತಲುಪಿಸುವ ಮೋದಿ ಅವರ ದೂರದೃಷ್ಟಿ. ರಾಜ್ಯ ಸರ್ಕಾರ ಎಸ್. ಸಿ /ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟಿದ್ದ 14,600ಕೋಟಿ ರೂಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವ ಮುಖೇನ ರಾಜ್ಯದ ದಲಿತ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಮೋಸ ಮಾಡಿದೆ. ಇದರಿಂದ ಅಹಿಂದ ಪರ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖವಾಡ ಕಳಚಿದೆ ಎಂದರು.
ಪ್ರಧಾನಿ ಮೋದಿಯವರು ರೈತರ ಆರ್ಥಿಕ ಬಲವರ್ಧನೆಗೆ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಿಂದ ಪ್ರತಿವರ್ಷ 6ಸಾವಿರ ರೂಗಳನ್ನು ರೈತರ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡ ಕಿಸಾನ್ ಸಮ್ಮಾನ್ ಗೆ 4ಸಾವಿರ ರೂಗಳನ್ನು ವಂತಿಗೆ ನೀಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ರೈತರಿಗೆ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಹಣವನ್ನು ರದ್ದು ಮಾಡಿ ಅದನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ದಲಿತ ಮತ್ತು ರೈತ ವಿರೋಧಿ ಸರ್ಕಾರ ಎಂದು ಕಿಡಿಕಾರಿದರು.
ಮೋದಿ ಅವರು ಅಯುಷ್ಮಾನ್ ಭಾರತ್ ಯೋಜನೆಯಡಿ 50ಕೋಟಿ ಬಡ ಜನರಿಗೆ 5 ಲಕ್ಷ ರೂಗಳ ಉಚಿತ ಅರೋಗ್ಯ ವಿಮೆ ನೀಡಿ ಬಡವರ ಬಾಳಿಕೆ ಬೆಳಕಾಗಿದ್ದಾರೆ. 8.46 ಲಕ್ಷ ಶಾಲೆಗಳು ಮತ್ತು 8.47 ಲಕ್ಷ ಅಂಗನವಾಡಿ ಕೇಂದ್ರಗಳು ಜಲಜೀವನ್ ಮಿಷನ್ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಪಡೆಯುತ್ತಿವೆ ಎಂದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಮಾತನಾಡಿ, ವಿಕಸನ ಭಾರತದ ಕನಸು ಹೊತ್ತ ನರೇಂದ್ರ ಮೋದಿ ಅವರು 2047ಕ್ಕೆ ದೇಶವನ್ನು ವಿಶ್ವದಲ್ಲಿ ಬಲಿಷ್ಠ ದೇಶವಾಗಿ ರೂಪಿಸುವ ಕನಸು ಹೊತ್ತಿದ್ದಾರೆ. 370ವಿಧಿ ರದ್ದು ಮತ್ತು ರಾಮಮಂದಿರ ನಿರ್ಮಾಣ ನಿರ್ಧಾರಗಳು ದೇಶವನ್ನು ಧಾರ್ಮಿಕವಾಗಿ ಐಕ್ಯಗೊಳಿಸಿದೆ. ತಿ. ನರಸೀಪುರ ಐತಿಹಾಸಿಕ ಇತಿಹಾಸವುಳ್ಳ ಕ್ಷೇತ್ರ, ಇಲ್ಲಿರುವ ದೇವಾಲಯಗಳನ್ನು ಪ್ರವಾಸಿ ತಾಣಗಳಾಗಿ ರೂಪಿಸಿ ವಿಶ್ವ ಮಟ್ಟಕ್ಕೇರಿಸುವ ಇರಾದೆ ಇದೆ. ಇಲ್ಲಿನ ಜನರ ಬಹು ದಿನಗಳ ಬೇಡಿಕೆಯಾದ ಕೈಗಾರೀಕರಣ ಅಸೆ ಈಡೇರಿಸಲು ಬದ್ದವಿರುವುದಾಗಿ ಅವರು ತಿಳಿಸಿದರು.
ಬಿಜೆಪಿ ಮುಖಂಡ ಡಾ. ರೇವಣ್ಣ ಕೇಂದ್ರ ಸರ್ಕಾರದ ಹಲವು ಯೋಜನೆಗಳಿಗೆ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು.ಕರೋಹಟ್ಟಿ ಪ್ರಭುಸ್ವಾಮಿ ನಿರೂಪಿಸಿದರು.
ಕ್ಷೇತ್ರದ ಪ್ರಭಾರ ಉಸ್ತುವಾರಿ ಸುರೇಶಬಾಬು, ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಎಲ್. ಆರ್.ಮಹದೇವಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಸಿದ್ದನಹುಂಡಿ ದಾಸಯ್ಯ, ತಾಲ್ಲೂಕು ಅಧ್ಯಕ್ಷ ಶಿವಕುಮಾರ್ (ಸತ್ಯ ), ಟೌನ್ ಅಧ್ಯಕ್ಷ ಮತ್ತು ಪುರಸಭೆ ಸದಸ್ಯ ಕೆ.ಕಿರಣ್, ಮಂಡಲದ ನಿಕಟ ಪೂರ್ವ ಅಧ್ಯಕ್ಷ ಕೆ. ಸಿ. ಲೋಕೇಶ್ ನಾಯಕ್ , ಎಸ್.ಸಿ. ಮೋರ್ಚಾದ ಜಿಲ್ಲಾಧ್ಯಕ್ಷ ಅನಿಲ್, ಹೆಳವರಹುಂಡಿ ಸಿದ್ದಪ್ಪ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಾಮ್ರಾಟ್ ಸುಂದರೇಶನ್ , ಕರೋಹಟ್ಟಿ ಮಹದೇವಯ್ಯ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಡವಾಡಿ ಮಹೇಶ್, ಸೋಮಶೇಖರ್,ಮಾಜಿ ತಾ ಪಂ ಸದಸ್ಯ ಬಸವರಾಜು, ಮೂಗೂರು ಎಂ.ಜಯಣ್ಣ, ಕರೋಹಟ್ಟಿ ಬಸವರಾಜು, ಕುರುಬೂರು ಶಿವು, ಕೊತ್ತೇಗಾಲ ಕಿಟ್ಟಿ, ಮಂಜು ಹಾಜರಿದ್ದರು.