ಪಾಂಡವಪುರ : ವಿಶ್ವೇಶ್ವರಯ್ಯ ನಾಲೆಗೆ ಚರಂಡಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರೈತರು ನಾಲೆ ಬಳಿ ಸೋಮವಾರ ಪ್ರತಿಭಟಿಸಿದರು.
ಬಿಜೆಪಿ ಮುಖಂಡ ಡೇರಿ ಮಂಜುನಾಥ್ ನೇತೃತ್ವದಲ್ಲಿ ರೈತರು ಪುರಸಭೆ ವ್ಯಾಪ್ತಿಯ ಕೃಷ್ಣನಗರ, ಶಾಂತಿನಗರ ಸೇರಿದಂತೆ ಅನೇಕ ಸ್ಥಳದಿಂದ ಜನರು ಆಗಮಿಸಿದ್ದರು. ಪಟ್ಟಣದಲ್ಲಿ ಹಾದು ಹೋಗಿರುವ ವಿ.ಸಿ ನಾಲೆಗೆ ಅನೇಕ ಬಡಾವಣೆಗಳಿಂದ ಚರಂಡಿ ನೀರು ಬಿಡುತ್ತಿರುವ ನಾಲೆ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ವೀಣಾ ಹಾಗೂ ಕಾವೇರಿ ನೀರಾವರಿ ನಿಗಮದ ವಿ.ಸಿ ನಾಲೆ ವಿಭಾಗದ ಎಇ ರವಿ ಸ್ಥಳಕ್ಕೆ ಆಗಮಿಸಿದಾಗ, ರೈತರು ಚರಂಡಿ ನೀರು ಹರಿಯುತ್ತಿರುವುದನ್ನು ತೋರಿಸಿ, ಸರಿಪಡಿಸಬೇಕೆಂದು ಆಗ್ರಹಿಸಿದರು.
ಪಟ್ಟಣದ ವಿಜಯ ಕಾಲೇಜು ಮುಂಭಾಗ ಅರಳಿಮರ ಹಾಗೂ ಹೊಸ ಬಡಾವಣೆ ಸಮೀಪದ ವಿಸಿ ನಾಲೆಗೆ ಚರಂಡಿ ನೀರು ಹರಿಯುತ್ತಿರುವುದರಿಂದ ಕಾವೇರಿ ನೀರು ಕಲುಷಿತ ಆಗುತ್ತಿದೆ. ನಾಲೆ ಆಧುನೀಕರಣ ಕಾಮಗಾರಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ನಾಲೆಗೆ ಚರಂಡಿ ನೀರು ಹರಿಯದಂತೆ ಸರಿಪಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮುಖ್ಯಾಧಿಕಾರಿ ವೀಣಾ ಅವರು ಎಇ ರವಿ ಅವರಿಗೆ ವಿಸಿ ನಾಲೆಗೆ ಚರಂಡಿ ನೀರು ಹರಿಯದಂತೆ ತಡೆಯೊಡ್ಡಿ ಎಂದು ಸೂಚಿಸಿದರು. ಅಲ್ಲದೆ ಸಕ್ಕಿಂಗ್ ಯಂತ್ರದ ಮೂಲಕ ಚರಂಡಿ ನೀರು ಸ್ವಚ್ಛಗೊಳಿಸುತ್ತೇವೆ ಎಂದು ಭರವಸೆ ನೀಡಿದರು.
ಬಿಜೆಪಿ ಮುಖಂಡರಾದ ಎಚ್.ಎನ್.ಮಂಜುನಾಥ್, ಭಾಸ್ಕರ್, ರೈತರಾದ ದೊರೆಸ್ವಾಮಿ, ಶ್ರೀನಿವಾಸ್, ವಿಶ್ವೇಶ್ವರ ಸೇರಿದಂತೆ ಅನೇಕರಿದ್ದರು.