ಮಾರಮ್ಮನ ಗುಡಿ ಆವರಣದಲ್ಲಿ ಆಚರಣೆ । ಭಕ್ತರ ಸಂಭ್ರಮ
ಪ್ರತಿನಿಧಿವರದಿ ಮಳವಳ್ಳಿ
ತಾಲೂಕಿನ ಬಿ.ಜಿ.ಪುರ ಸಮೀಪದ ಮುಟ್ಟನಹಳ್ಳಿ ಗ್ರಾಮದಲ್ಲಿ ಸೋಮವಾರ ಮಂಟೇಸ್ವಾಮಿ ಕೊಂಡೋತ್ಸವ ಭಕ್ತಿಪೂರಕವಾಗಿ ಜರುಗಿತು.
ಸಂಪ್ರದಾಯದಂತೆ ಭಾನುವಾರ ಗ್ರಾಮಸ್ಥರು ಜಮೀನುಗಳಿಗೆ ತೆರಳಿ ಹುಣಸೆ ಮತ್ತು ಗೊಬ್ಬಳಿ ಮರಗಳನ್ನು ಕಡಿದು ತುಂಡರಿಸಿ ತಂದು ಮಾರಮ್ಮನ ಗುಡಿ ಆವರಣದಲ್ಲಿ ಜೋಡಣೆ ಮಾಡಲಾಗಿತ್ತು.
ಸಂಜೆಯ ವೇಳೆಗೆ ಗ್ರಾಮದ ಯುಮಾನರು, ಮುಖಂಡರು ಪೂಜೆಸಲ್ಲಿಸಿ ಕೊಂಡೋತ್ಸವಕ್ಕೆ ಸಿದ್ದಪಡಿಸಿದ್ದ ಸೌಧೆ ಗುಡ್ಡೆಗೆ ಬೆಂಕಿ ಹಚ್ಚುವ ಮೂಲಕ ರಾತ್ರಿ ಪೂರ್ತಿ ಸುತ್ತುವರಿದು ಬೆಂಕಿ ಕೆಂಡದ ರಾಶಿ ಮಾಡಲಾಯಿತು.
ಸೋಮವಾರ ಬೇಳಗಿನ ಜಾವ ಮಂಟೇಸ್ವಾಮಿ, ಸಿದ್ದಪ್ಪಾಜಿ, ಕುರುಬನಕಟ್ಟೆ ನಿಂಗಯ್ಯ, ಚನ್ನಯ್ಯ ರವರ ಕಂಡಾಯಗಳನ್ನು ಹೊತ್ತ ಅರ್ಚಕರನ್ನು ಗ್ರಾಮದ ಹೊರ ವಲಯದಲ್ಲಿರುವ ನಿಂಗಯ್ಯನಕಟ್ಟೆ ಬಳಿಗೆ ಕರೆತಂದು ಪೂಜೆ ಸಲ್ಲಿಸಲಾಯಿತು.
ನಂತರ ಹೂ ಹೊಂಬಾಳೆ ಮೂಲಕ ತಮಟೆ, ನಗಾರಿ, ಮಂಗಳ ವಾದ್ಯದೊಡನೆ ಮೆರವಣಿಗೆಯಲ್ಲಿ ದೇವಸ್ಥಾನದ ಬಳಿಗೆ ಬರಲಾಯಿತು. ಈ ವೇಳೆ ಪೂಜೆ ಸಲ್ಲಿಸಿ ಕೊಂಡೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಕಂಡಾಯಗಳನ್ನು ಹೊತ್ತ ಅರ್ಚಕರು ಬೆಂಕಿ ರಾಶಿಯನ್ನು ತುಳಿದುಕೊಂಡು ಸಾಗಿದರು. ಈ ವೇಳೆ ನೆರೆದ ಭಕ್ತ ಸಮೂಹ ಘೋಷಣೆಗಳನ್ನು ಕೂಗುವ ಮೂಲಕ ಭಕ್ತಿ ಸಮರ್ಪಿಸಿದರು.
ನಂತರ ಗ್ರಾಮದ ಬೀದಿಗಳಲ್ಲಿ ಕಂಡಾಯಗಳ ಮೆರವಣಿಗೆ ನಡೆಸಲಾಯಿತು. ಹಬ್ಬದ ಪ್ರಯುಕ್ತ ಮನೆ ಮನೆಗೂ ತಳಿರು ತೋರಣಗಳನ್ನು ಕಟ್ಟಿ ರಸ್ತೆಗಳಲ್ಲಿ ರಂಗೋಲಿ ಚಿತ್ತಾರಗಳನ್ನು ಬಿಡಿಸಲಾಗಿತ್ತು. ಕುಟುಂಬ ಸಮೇತರಾಗಿ ಕಂಡಾಯಗಳಿಗೆ ಪೂಜೆ ಸಲ್ಲಿಸಿ ಗ್ರಾಮಸ್ಥರು ನಮಿಸಿದರು. ಕೊಂಡೋತ್ಸವದಲ್ಲಿ ಸುತ್ತಲಿನ ಹತ್ತಾರು ಗ್ರಾಮಗಳಿಂದ ಸಾವಿರಕ್ಕೂ ಅಧಿಕವಾಗಿ ನೀಲಗಾರರು, ಮಂಟೇಸ್ವಾಮಿ ಮತ್ತು ಸಿದ್ದಪ್ಪಾಜಿ ಭಕ್ತರು ಬೆತ್ತ-ಜೋಳಿಗೆಯೊಂದಿಗೆ ಪಾಲ್ಗೊಂಡಿದ್ದರು. ಮಂಗಳವಾರ ರಾತ್ರಿ ಮಾರಮ್ಮನ ಕೊಂಡೋತ್ಸವ ಸರಳವಾಗಿ ನಡೆಯಿತು.
25 ಎಂಎಲ್ವಿ 1
ಮಳವಳ್ಳಿ ತಾಲೂಕಿನ ಮುಟ್ಟನಹಳ್ಳಿಯಲ್ಲಿ ಸೋಮವಾರ ನಡೆದ ಕೊಂಡೋತ್ಸವದಲ್ಲಿ ಮಂಟೇಸ್ವಾಮಿ, ಸಿದ್ದಪ್ಪಾಜಿ ಕಂಡಾಯಗಳನ್ನು ಹೊತ್ತ ದೇವರ ಗುಡ್ಡರು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿಯಿಂದ ಕೊಂಡ ಹಾಯ್ದುರು. ಸಹಸ್ರ ಸಂಖ್ಯೆಯಲ್ಲಿ ಭಕ್ತರು ಜಮಾವಣೆಗೊಂಡಿದ್ದರು.